ಬೆಳಗಾವಿ : ಪೊಲೀಸ್ ಇಲಾಖೆ ‘ ಒಂದೇ ದೇಶ, ಒಂದೇ ತುರ್ತು ಕರೆ-112’ ಎಂಬ ಉದ್ದೇಶದಿಂದ ಜನರ ರಕ್ಷಣೆಗೆ ತುರ್ತು ಸೇವಾ ಸ್ಪಂದನ ಸಹಾಯ ವ್ಯವಸ್ಥೆ ಕಲ್ಪಿಸಲಿದ್ದು, ಸೇವೆ ನೀಡಲು ಸಿದ್ದವಾಗಿರುವ ವಾಹನಗಳಿಗೆ ಬೆಳಗಾವಿ ಕಮೀಷನರ್ ಡಾ.ಕೆ.ತ್ಯಾಗರಾಜನ್ ಅವರು ಭಾನುವಾರ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಪೊಲೀಸ್, ಅಗ್ನಿ, ವೈದ್ಯಕೀಯ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ತ್ವರಿತ ಸೇವೆ ನೀಡಲು ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಸ್ಥಾಪಿಸಲಾಗಿದೆ. ಸಂಖ್ಯೆ 112ಕ್ಕೆ ಡಯಲ್ ಮಾಡಿದರೆ ದಿನದ 24 ಗಂಟೆಯೂ ತ್ವರಿತ ಸೇವೆ ದೊರೆಯಲಿದೆ ಎಂದರು.
ಪ್ರಸ್ತುತ ಇರುವ ಡಯಲ್ -100, 108, 101, ಹಾಗೂ ಇತರೆ ತುರ್ತು ಸಹಾಯ ಸಂಖ್ಯೆಗಳನ್ನು ಏಕೀಕರಿಸಿ ‘ಒಂದು ದೇಶ, ಒಂದು ತುರ್ತು ಸ್ಪಂದನ ವ್ಯವಸ್ಥೆ-112 ಸ್ಥಾಪಿಸಲಾಗಿದ್ದು, ಇಂದಿನಿಂದ ಸೇವೆ ಸಿಗಲಿದೆ.
ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸುವ ಸಾರ್ವಜನಿಕರ ವಿಳಾಸ ಮತ್ತು ಮೊಬೈಲ್ ಲೊಕೇಶನ್ ಮಾಹಿತಿಯನ್ನು ಕಂಪ್ಯೂಟರ್ ಆಧರಿತ ರವಾನೆ ವ್ಯವಸ್ಥೆ ಸಹಾಯದಿಂದ ಪರಿಶೀಲಿಸಿ ತೊಂದರೆಗೊಳಗಾದವರ ಸ್ಥಳವನ್ನು ಡಿಜಿಟಲ್ ನಕ್ಷೆಯಲ್ಲಿ ಗುರುತಿಸಿ ರಕ್ಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಪರ್ಕಿಸುವ ವಿಧಾನ :
- ದೂರವಾಣಿ, ಮೊಬೈಲ್ ನಲ್ಲಿ 112 ಸಂಖ್ಯೆಯನ್ನು ಡಯಲ್ ಮಾಡಬೇಕು.
- [email protected] ಗೆ ಈ-ಮೇಲ್ ಮಾಡಬಹುದು.
- www.ka.ners.in ಅಂತರ್ಜಾಲ ಮೂಲಕ ಸಂಪರ್ಕ ಮಾಡಬಹುದು.
- ಸ್ಮಾರ್ಟ್ ಪೋನಿನ ಪವರ್ ಬಟನ್ ಅನ್ನು 3 ಅಥವಾ 5 ಬಾರಿ ತಡೆರಹಿತವಾಗಿ ಒತ್ತುವ ಮೂಲಕ ಸಂಪರ್ಕ ಮಾಡಬಹುದು.
- ಸಾಮಾನ್ಯ ಪೋನಿನಲ್ಲಿ ಸಂಖ್ಯೆ 5 ಅಥವಾ ಸಂಖ್ಯೆ 9 ಅನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಸಂಪರ್ಕಿಸಬಹುದು ಎಂದು ಕಮೀಷನರ್ ಡಾ.ಕೆ.ತ್ಯಾಗರಾಜನ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು