ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಸಮೀಪದಲ್ಲಿ ಜಾಗ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದು ಶ್ಲಾಘನೀಯವಾಗಿದೆ’ ಎಂದು ಸಿಂಡಿಕೇಟ್ ಸದಸ್ಯ ಡಾ.ಆನಂದ ಹೊಸೂರ ಹೇಳಿದ್ದಾರೆ.
‘ಜಮೀನು ಒದಗಿಸುವ ಮೂಲಕ, ವಿಶ್ವವಿದ್ಯಾಲಯದ ದಶಮಾನೋತ್ಸವ ಸಂದರ್ಭದಲ್ಲಿ ಸರ್ಕಾರವು ಈ ಭಾಗದ ಜನರಿಗೆ ಖುಷಿಯ ಸುದ್ದಿ ಕೊಟ್ಟಿದೆ. ಅನೇಕ ವರ್ಷಗಳಿಂದ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾರ್ಯಗಳು ಮುಂದುವರಿಯುವುದಕ್ಕೆ ಅವಕಾಶ ಕೊಟ್ಟಂತಾಗಿದೆ. ಇದರೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ತುಂಬಿದಂತೆಯೂ ಆಗಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವು ವಿಶಿಷ್ಟ ಸ್ಥಾನಮಾನ ಪಡೆಯಲಿ’ ಎಂದು ಹಾರೈಸಿದ್ದಾರೆ.