ನೇಹಾ ಹಿರೇಮಠ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ನೇಹಾಗೆ ಆದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಹಲವರು ಆಗ್ರಹಿಸಿದ್ದಾರೆ. ಕೊಲೆ ಆರೋಪಿ ಫಯಾಜ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ನೇಹಾ ಹುಬ್ಬಳ್ಳಿಯ ಎಂಸಿಎ 1ನೇ ವರ್ಷದ ವಿದ್ಯಾರ್ಥಿ ಆಗಿದ್ದರು.
ಆರೋಪಿ ಫಯಾಜ್ ಅದೇ ಕಾಲೇಜಿನಲ್ಲಿ ನೇಹಾಗೆ ಸೀನಿಯರ್ ಆಗಿದ್ದ. ಕೆಲ ತಿಂಗಳಿಂದ ಆರೋಪಿ ಪ್ರೀತಿಸುವಂತೆ ನೇಹಾಗೆ ಕಿರುಕುಳ ನೀಡುತ್ತಿದ್ದನು. ಕೆಲ ದಿನಗಳ ಹಿಂದೆ ಆಕೆಗೆ ಪ್ರಪೋಸ್ ಮಾಡಿದ್ದು ಆಕೆ ತಿರಸ್ಕರಿಸಿದ್ದಳು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕೋಪಗೊಂಡ ಫಯಾಜ್ ಕಾಲೇಜ್ ಕ್ಯಾಂಪಸ್ನಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್ ಸೇರಿದಂತೆ ಸಿನಿಮಾ ತಾರೆಯರು ಕೂಡ ಘಟನೆಯನ್ನು ಖಂಡಿಸಿದ್ದಾರೆ. ಇದೀಗ ನಟ ಕಿಶೋರ್ ಈ ಬಗ್ಗೆ ಪ್ರತಿಕ್ರಿಯಿಸಿ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. “ಬಾಳಿ ಬದುಕಬೇಕಾದ ಜೀವ ನೇಹಾಗೆ ನಡೆದದ್ದು ನಿಜಕ್ಕೂ ಅಕ್ಷಮ್ಯ ಅಪರಾಧ. ಒಂದು ನಾಗರೀಕ ಸಮಾಜವಾಗಿ ಇದು ನಮ್ಮೆಲ್ಲರ ಸೋಲು” ಎಂದಿದ್ದಾರೆ.
“ಈಗಾಗಲೇ ಸಾಕ್ಷಿ ಸಮೇತ ಬಂಧಿತವಾಗಿರುವ ಅಪರಾಧಿಗೆ ಮತ್ಯಾರೂ ಈ ಥರದ ಕೃತ್ಯವೆಸಗದಂತೆ ತನಿಖೆ ಮತ್ತು ಅತಿ ಕಠಿಣ ಶಿಕ್ಷೆ ಆಗುವುದರ ಜೊತೆಗೆ ಮಹಿಳೆಯರ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳು ಅದರ ಮೂಲ ಕಾರಣಗಳನ್ನು ನಿಯಂತ್ರಿಸಲು ಜಾಗೃತಿ ಹೆಚ್ಚಿಸಲು ನಾವು ಮತ್ತು ಸರ್ಕಾರಗಳು ಸಾಧ್ಯ ಕ್ರಮಗಳೆಲ್ಲವನ್ನೂ ಕೈಗೊಳ್ಳಬೇಕು” ಎಂದು ಕಿಶೋರ್ ಆಗ್ರಹಿಸಿದ್ದಾರೆ.
“ದುರಂತವೆಂದರೆ ಯಾವುದೇ ಶಿಕ್ಷೆ ನೇಹಾಳನ್ನು ತಿರುಗಿ ತರಲಾಗದು. ಆದರೆ ನಮ್ಮ ಕೈಲಿ ಸಾಧ್ಯವಾದದ್ದು ಮತ್ಯಾರೂ ನೇಹಾಳಂತೆ ಬಲಿಯಾಗದಿರುವಂಥ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು. ಆದರೆ ಈ ನೋವಿನ ಕ್ಷಣದಲ್ಲೂ ಅದರಲ್ಲಿ ಹಿಂದೂ -ಮುಸ್ಲಿಂ ಮಾಡುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.