ಬೆಂಗಳೂರು, ಫೆಬ್ರವರಿ 3: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Surjewala)ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಅನ್ನ, ಅಕ್ಷರ, ಜ್ಞಾನದಂತಹ ತ್ರಿವಿಧ ದಾಸೋಹ ನೀಡಿದ ಮಹಾಪುರುಷ ಸಿದ್ಧಗಂಗಾ ಮಠದ ಶಿವಕುಮಾರಶ್ರೀಗೆ ಮರಣೋತ್ತರ ಭಾರತರತ್ನ ಸಿಗಲಿ. ಲಕ್ಷಾಂತರ ಮಕ್ಕಳಿಗೆ ಉಚಿತ ಅನ್ನ, ಶಿಕ್ಷಣ ನೀಡಿದ ಮಹನೀಯರು. ಈ ಗೌರವಕ್ಕೆ ಅವರಂತಹ ಅರ್ಹರು ಮತ್ತೊಬ್ಬರಿಲ್ಲ ಎಂದಿದ್ದಾರೆ.
ಶಿವಕುಮಾರ ಶ್ರೀಗಳಿಗೆ ನಿಜಕ್ಕೂ ಮರಣೋತ್ತರ ಭಾರತ ರತ್ನ ಸಿಗಬೇಕು. ಸಿದ್ಧಗಂಗಾ ಶ್ರೀಗಳು ದೇಶಕ್ಕೆ ಮಾದರಿಯಾಗಿದ್ದವರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ: ಡಿಕೆ ಶಿವಕುಮಾರ್
ಈ ವಿಚಾರವಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮ ತಕರಾರು ಇಲ್ಲ. ಆದರೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದಿದ್ದಾರೆ. ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದರು. ಅವರಿಗೆ ಗೌರವ ಸಲ್ಲಿಸಬೇಕು ಎನ್ನುವುದು ನಮ್ಮ ಒತ್ತಾಯವಿದೆ ಎಂದು ಹೇಳಿದ್ದಾರೆ.