ನೆಲಮಂಗಲ: 2013ರ ಕೊಲೆ ಆರೋಪಿಗೆ 55 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ನ್ಯಾಯಾಲಯ ತೀರ್ಪುಕೊಟ್ಟಿದೆ. ಕಾಂತರಾಜು ಅಲಿಯಾಸ್ ರಾಜು (31) ಶಿಕ್ಷೆಗೆ ಒಳಪಟ್ಟ ಅಪರಾಧಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಹಸುಗಳನ್ನ ಸಾಕುವ ಕೆಲಸವನ್ನ ಅಪರಾಧಿ ಕಾಂತರಾಜು ಹಾಗೂ ಆತನ ಹೆಂಡತಿ ಮೃತೆ ಲಲಿತಾಬಾಯಿ ಮಾಡುತ್ತಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆ ಕಾಟನಾಯಕನಹಳ್ಳಿಯವರಾದ ಇಬ್ಬರು ಜೀವನಾಧಾರಕ್ಕಾಗಿ ನೆಲಮಂಗಲದ ಗೊಲ್ಲಹಳ್ಳಿಗೆ ಬಂದಿದ್ದು, ಅಪರಾಧಿ ಕಾಂತರಾಜ್ ತನಗಿಂತ 11 ವರ್ಷ ಹಿರಿಯವಳಾದ ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಂದಿಗೆ ಅಕ್ರಮವಾಗಿ ಮದುವೆಯಾಗಿದ್ದ.
ಘಟನೆ ಪ್ರತ್ಯಕ್ಷವಾಗಿ ನೋಡಿದ ಮಕ್ಕಳಿಗೆ ಬೆದರಿಸಿದ್ದ
ದಿನ ಕಳೆದಂತೆ ಕೌಟುಂಬಿಕ ಕಲಹ ಉಂಟಾದ ಕಾರಣ ಮೃತೆ ಲಲಿತಾಬಾಯಿ ತನ್ನ ಪತಿ ಕಾಂತರಾಜುಗೆ ಬೆದರಿಸಲು ಕೋಪದಿಂದ ನೇಣು ಹಾಕಿಕೊಳ್ಳುವುದಾಗಿ ಕೊರಳಿಗೆ ಹಗ್ಗ ಕಟ್ಟಿಕೊಂಡಿರುತ್ತಾಳೆ. ಈ ವೇಳೆ ಅಪರಾಧಿ ಕಾಂತರಾಜು ಆಕೆಯ ಕಾಲು ಹಿಡಿದು, ಎಳೆದು ಕುತ್ತಿಗೆಗೆ ಹಗ್ಗ ಬಿಗಿದುಕೊಳ್ಳುವಂತೆ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ವೇಳೆ ಪ್ರತ್ಯಕ್ಷವಾಗಿ ನೋಡಿದ ಮಕ್ಕಳಿಗೆ ಬೆದರಿಸಿ ಈ ವಿಚಾರ ಯಾರಿಗಾದರು ಹೇಳಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ನಂತರ ಮೃತ ದೇಹವನ್ನ ಚಿತ್ರದುರ್ಗ ಜಿಲ್ಲೆಯ ಕಾಟನಾಯಕನಹಳ್ಳಿಗೆ ತೆಗೆದುಕೊಂಡು ಹೋಗಿ ಎಸೆದಿದ್ದ.
ಶವವನ್ನ ಕಂಡು ಘಟನೆಗೆ ಸಂಬಂಧಿಸಿದಂತೆ ಮೃತಳ ಮಾವ ಲಚ್ಚನಾಯಕ್ ಹಿರಿಯೂರು ಪೊಲೀಸ್ ಠಾಣೆಗೆ ಬಂದು, ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಹಿರಿಯೂರು ಪೊಲೀಸರಿಗೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೇ ಕೊಲೆ ನಡೆದಿರುವುದಾಗಿ ತಿಳಿದುಬರುತ್ತದೆ.
ಅದರಂತೆ, ನೆಲಮಂಗಲ ಗ್ರಾಮಾಂತರ ಠಾಣೆಗೆ ಪ್ರಕರಣವನ್ನ ವರ್ಗಾಯಿಸಿದ್ದಾರೆ. ಅಂದಿನ ಡಿವೈಎಸ್ಪಿ ಮಲ್ಲೇಶ್ ಪ್ರಕರಣದ ತನಿಖೆ ನಡೆಸಿದ್ದು ನೆಲಮಂಗಲ ಗ್ರಾಮಾಂತರ ಠಾಣೆ ಮೊಕದ್ದಮೆ ಸಂಖ್ಯೆ 363/2013 ರಂತೆ ಐಪಿಸಿ 302, 201, 497, 506 ಹಾಗೂ ಎಸ್ಸಿಎಸ್ಟಿ ದೌರ್ಜನ್ಯ ಖಾಯ್ದೆ ಅಡಿ ದೋಷಾರೋಪ ಪಟ್ಟಿಯನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಅಪರ ಸತ್ರ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡನೆಯನ್ನ ಸರ್ಕಾರಿ ಅಭಿಯೋಜಕರು ಸಂಗಮೇಶ ಹಾವೇರಿ ಅವರು ನಡೆಸಿದ್ದು, ಪ್ರಕರಣ 7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದೆ. ಇದೀಗ, ನ್ಯಾಯಾಧೀಶೆ ಪ್ರಶೀಲಾ ಕುಮಾರಿ ವಾದ-ಪ್ರತಿವಾದಗಳು, ದೋಷಾರೋಪ ಪಟ್ಟಿಯನ್ನ ಪರಿಶೀಲನೆ ನಡೆಸಿದ್ದು ಅಪರಾಧ ಸಾಬೀತಾದ ಹಿನ್ನೆಲೆ ಅಪರಾಧಿ ಕಾಂತರಾಜುಗೆ 55,000 ರೂ ದಂಡ ವಿಧಿಸಿದ್ದು, ಮೃತಳ ಮಕ್ಕಳಿಗೆ 50,000 ರುಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.