ವಿಜಯಪುರ: ಬಿ.ವೈ. ವಿಜಯೇಂದ್ರ ದೆಹಲಿಗೆ ಹೋಗಿದ್ದು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ಎದುರಿಸಲೇ ಹೊರತು, ಪಕ್ಷದ ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸಲು ಹೋಗಿದ್ದರು ಎಂಬುದು ಸುಳ್ಳು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಿಷಸ್ನಲ್ಲಿ ಅಕ್ರಮವಾಗಿ ಇಟ್ಟಿರುವ ಹಣ ಎಲ್ಲಿಂದ ಬಂತು? ‘ಕಿಯಾ’ ಕಂಪನಿಗೆ ವರ್ಗಾವಣೆ ಆಗಿದ್ದು ಹೇಗೆ? ಎನ್ನುವ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ವಿಜಯೇಂದ್ರ ಅವರನ್ನು ವಿಚಾರಣೆ ನಡೆಸಿದೆ ಎಂದರು.
ಕೋವಿಡ್ ವಿಚಾರ ಹಾಗೂ ಪಕ್ಷದ ಆಂತರಿಕ ವಿಚಾರವನ್ನು ರಾಜ್ಯ ಉಪಾಧ್ಯಕ್ಷರ ಜತೆ ರಾಷ್ಟ್ರೀಯ ನಾಯಕರು ಮಾತನಾಡುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಮುಖ್ಯಮಂತ್ರಿ ಇದ್ದಾರೆ. ಅವರ ಜತೆ ಮಾತನಾಡುತ್ತಾರೆಯೇ ಹೊರತು ಉಪಾಧ್ಯಕ್ಷರ ಜೊತೆ ಮಾತನಾಡುವುದಿಲ್ಲ. ರಾಜ್ಯದಲ್ಲಿ ಒಂಬತ್ತು ಜನ ಉಪಾಧ್ಯಕ್ಷರು ಇದ್ದಾರೆ. ಹಾಗಾದರೆ, ಅವರನ್ನು ಬಿಟ್ಟು ವಿಜಯೇಂದ್ರ ಜತೆ ಮಾತನಾಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.
ವಿಜಯೇಂದ್ರ ಅವರ ದೆಹಲಿ ಪ್ರವಾಸ ಯಶಸ್ವಿಯಾಗಿದ್ದು, ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ. ವಿಜಯೇಂದ್ರ ಕೇವಲ 10 ನಿಮಿಷ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಅದನ್ನು ಬಿಟ್ಟು ಒಂದು ಗಂಟೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಈ ಕುರಿತು ವರಿಷ್ಠರಿಂದ ಸ್ಪಷ್ಟ ಮಾಹಿತಿ ದೊರೆತಿದೆ ಎಂದರು.
ನಿವೃತ್ತಿಯಾಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೌರವಯುತವಾಗಿ ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು. ಹೊಗಳುಭಟ್ಟರ ಮಾತು ಕೇಳಿದರೆ ಪಕ್ಷದಲ್ಲಿ ಸಾಕಷ್ಟು ಅವಮಾನಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Laxmi News 24×7