Breaking News

ದಿ. ಸುರೇಶ್ ಅಂಗಡಿ ಕನಸಿನ ಯೋಜನೆಗೆ ಅನುದಾನ

Spread the love

ಧಾರವಾಡ, ಮಾರ್ಚ್ 08: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ನೆನಪು ಮಾಡಿಕೊಂಡರು.

ಬೆಳಗಾವಿ ಕ್ಷೇತ್ರದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ 2020ರ ಸೆಪ್ಟೆಂಬರ್ 23ರಂದು ವಿಧಿವಶರಾಗಿದ್ದರು. ಕೋವಿಡ್ ಸೋಂಕಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

 

ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ದಿ. ಸುರೇಶ್ ಅಂಗಡಿ ಅವರ ಕನಸಾಗಿತ್ತು. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಧಾರವಾಡ-ಕಿತ್ತೂರು-ಬೆಳಗಾವಿ ನಡುವೆ 73 ಕಿ. ಮೀ. ಉದ್ದದ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ 463 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ.

 

“ಈ ಯೋಜನೆಯನ್ನು ಅದ್ಯತೆ ಮೇರೆಗೆ ಪೂರ್ಣಗೊಳಿಸುವುದು ನಾವು ಸುರೇಶ್ ಅಂಗಡಿ ಅವರಿಗೆ ಸಲ್ಲಿಸುವ ಗೌರವ” ಎಂದು ಯಡಿಯೂರಪ್ಪ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದರು.

ದಶಕಗಳ ಬೇಡಿಕೆ ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ದಶಕಗಳ ಬೇಡಿಕೆಯಾಗಿದೆ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದಾಗ ಯೋಜನೆಯನ್ನು ಚುರುಕುಗೊಳಿಸಲು ಶ್ರಮಿಸಿದರು.

 

ಕೇಂದ್ರ ಸರ್ಕಾರವೂ ಈ ರೈಲು ಯೋಜನೆಗೆ ಒಪ್ಪಿಗೆ ನೀಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50ರ ಅನುಪಾತದಲ್ಲಿ ಈ ಯೋಜನೆಗೆ ಅನುದಾನ ನೀಡಲಿವೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೀಡಲಿದೆ.

ಈ ಯೋಜನೆಯಲ್ಲಿ ಒಟ್ಟು 11 ನಿಲ್ದಾಣಗಳು ಬರುತ್ತವೆ. ಬೆಳಗಾವಿಯಿಂದ ಹೊರಡುವ ರೈಲು ದೇಸೂರ, ಕೆ. ಕೆ. ಕೊಪ್ಪ, ಹಿರೇಬಾಗೇವಾಡಿ, ಎಂ. ಕೆ. ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರ, ಮಮ್ಮಿಗಟ್ಟಿ, ಕ್ಯಾರಕೊಪ್ಪ ಮೂಲಕ ಧಾರವಾಡಕ್ಕೆ ಬಂದು ಸೇರಲಿದೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ