ಬೆಂಗಳೂರು: ನೋಟಿಸ್ ಕೊಟ್ಟರೆ ಅಂಜುವ ಮಗ ನಾನಲ್ಲ. ನನಗೆ ನೋಟಿಸ್ ಕೊಟ್ಟರೂ ನನ್ನ ಬಾಯಿ ಬಂದ್ ಆಗುವುದಿಲ್ಲ. ನಾನು ಯಾರಿಗೂ ಪಂಪ್ ಹೊಡೆಯೋ ರಾಜಕಾರಣಿ ಅಲ್ಲ. ನನ್ನನ್ನು ಅಂಜಿಸುತ್ತೇನೆ ಎಂದು ತಿಳಿದಿದ್ದರೆ, ಆದಷ್ಟು ಬೇಗ ಕುರ್ಚಿ ಖಾಲಿ ಮಾಡಿಸಬೇಕಾಗುತ್ತೆ ಎಂದು ಶಾಸಕ ಬಸಗೌಡ ರಾ.ಪಾಟೀಲ್ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಬಿಎಸ್ವೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 2ಎ ಕೊಡುತ್ತೇವೆ ಅಂತ ಹೇಳಿ ಈಗ ಹೊಸ ನಾಟಕ ಶುರು ಮಾಡಿದ್ದಾರೆ. ನಿಮ್ಮ ಮಕ್ಕಳು ಮೊಮ್ಮಕ್ಕಳು ಸಲುವಾಗಿ ಸರ್ಕಾರ ಮಾಡಬೇಡಿ, ನಾವು ನಮ್ಮ ಸಮುದಾಯದ ಮಕ್ಕಳ ಸಲುವಾಗಿ ಬಂದಿದ್ದೇವೆ. ವೀರೇಂದ್ರ ಪಾಟೀಲ್ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ ಎಂದು ಟೀಕಿಸಿದರು.ಇದು ಸುವರ್ಣಾಕ್ಷರದಿಂದ ಬರೆದಿಡುವಂತ ಹೋರಾಟ. 3ಬಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಅದು ಎಲ್ಲ ಲಿಂಗಾಯತರಿಗೂ ಸಿಕ್ಕಿದೆಮನವಿ ಕೊಟ್ಟು ಕೊಟ್ಟು ಸಾಕಾಗಿದೆ. 2ಎ ತೆಗೆದುಕೊಂಡು ಹೋಗಲು ಬಂದಿದ್ದೇವೆ. ನಮಗೂ ವಿಧಾನಸೌಧದ ಮೂರನೇ ಮಹಡಿಗೆ ಹೋಗಿ ಕೂರುವ ಕಾಲ ಬರುತ್ತದೆ. ಎಲ್ಲರಿಗೂ ಒಂದು ಕಾಲ ಬರಲಿದೆ ಎಂದರು.
ಅಧಿವೇಶನದವರೆಗೆ ನಾವು ಹೋರಾಟ ಮಾಡುತ್ತೇವೆ. ವಿಧಾನಸಭೆಯಲ್ಲಿ ನಾನು ಎದ್ದು ನಿಲ್ಲುತ್ತೇನೆ. ಸಿಎಂ ಉತ್ತರವನ್ನು ಕೊಡಲೇಬೇಕು. ನಾಟಕ ಆರಂಭಿಸಿದರೆ ನಮ್ಮ ಸಮುದಾಯದ ಸಚಿವರು ರಾಜೀನಾಮೆ ಕೊಡಬೇಕು. ಈ ಅಧಿವೇಶನ ಮುಗಿಯುವುದರಲ್ಲಿ 2ಎ ಮೀಸಲಾತಿ ನೀಡಬೇಕು. ಈ ನಾಟಕ ಕಂಪನಿ ನಮಗೆ ಸಾಕಾಗಿದೆ. ನಮ್ಮ ಸಮುದಾಯಕ್ಕೆ ಚಿಕ್ಕಪುಟ್ಟ ಖಾತೆ ನೀಡಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಎಂದು ಕೇಳಲ್ಲ ಎಂದರು.
ಪಂಚಮಸಾಲಿ ಸಮಾವೇಶದಿಂದ ಗಡ ಗಡ ನಡುಗುತ್ತಿದ್ದಾರೆ. ಕೈಗಳು ತರ ತರ ನಡುಗುತ್ತಿವೆ. 2ಎ ಮೀಸಲಾತಿ ಸಿಗದಿದ್ದರೆ ಹೋರಾಟ ನಿರಂತರ. ಪಂಚಮಸಾಲಿ ಸಮುದಾಯಕ್ಕೆ 2ಎ ಕೊಡಬೇಕು ಎಂಬುದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಇದೊಂದು ಐತಿಹಾಸಿಕ ಹೋರಾಟ. ನಾನು ಕರ್ನಾಟಕ ಸರ್ಕಾರದ ಜನಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದರು.
2ಎ ಗಾಗಿ ನಾವು ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಈ ಸಲ ತಗೊಂಡು ಹೋಗೋಕೆ ಬಂದಿದ್ದೇವೆ. ವಿಧಾನಸಭೆಯಲ್ಲಿ ಮೊನ್ನೆ ಮಾತನಾಡ್ದೆ ನಾನು 25 ಎಂಪಿಗಳನ್ನು ಕರ್ಕೊಂಡು ಹೋಗಿ ಅಂದ್ರು. ನಾನ್ ಯಾಕೆ ಹೋಗಲಿ. ಓಬಿಸಿಗೆ ಸೇರಿಸಬೇಕಾದ್ರೆ ನಾನು ದೆಹಲಿಗೆ ಹೋಗ್ತೇನೆ. ಎಲ್ರಿಗೂ ಒಂದು ಕಾಲ ಬರುತ್ತೆ. 2ಎ ಮಾಡ್ತೇನೆ ಅಂತ ಯಾಕೆ ಹೇಳಿದ್ರಿ? ಈಗ ನಾಟಕ ಶುರು ಮಾಡಿದ್ದೀರಿ ಎಂದು ಕಿಡಿಕಾರಿದರು.