ಬೆಂಗಳೂರು: ಪೂಜೆಯ ಹೆಸರಿನಲ್ಲಿ ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಕಲಿ ಸ್ವಾಮೀಜಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ದಾದಾಪೀರ್ (49) ಬಂಧಿತ ಆರೋಪಿ.
ಜನರನ್ನು ವಂಚಿಸಿ ಪಡೆದ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗಲೇ ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು 53 ಲಕ್ಷ ರೂ ಮೌಲ್ಯದ 485.4 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನನ್ನು ತಾನು ನಾರಾಯಣ, ವೆಂಕಟರಮಣ ಮತ್ತಿತರ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಸ್ವಾಮೀಜಿಯ ಸೋಗಿನಲ್ಲಿ ಅಮಾಯಕರನ್ನು ನಂಬಿಸುತ್ತಿದ್ದ. ಮತ್ತು ತಾನು ಮಾಟ ಮಂತ್ರ ನಿವಾರಣೆ, ನಿಧಿ ದೊರಕಿಸಿಕೊಡಲು ಪೂಜೆ ಮಾಡುತ್ತೇನೆ ಎಂದು ನಂಬಿಸುತ್ತಿದ್ದ. ನಿರ್ದಿಷ್ಟ ದಿನಗಳವರೆಗೂ ವಿಶೇಷ ಪೂಜೆ ಮಾಡುವುದಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಇರಿಸುವಂತೆ ಅವರಿಗೆ ಸೂಚಿಸುತ್ತಿದ್ದ. ಬಳಿಕ ಮನೆಯವರನ್ನು ಯಾಮಾರಿಸಿ ಚಿನ್ನಾಭರಣಗಳ ಸಮೇತ ಕಾಲ್ಕೀಳುತ್ತಿದ್ದ. ಇದೇ ರೀತಿ ಹುಳಿಮಾವು, ಬಳ್ಳಾರಿ, ಭದ್ರಾವತಿ ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ ಆರೋಪ ಕೇಳಿಬಂದಿತ್ತು. ಸದ್ಯ ಆರೋಪಿಯಿಂದ 53 ಲಕ್ಷದ 485.4 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಿಂದಲೇ ಡಿಜಿಟಲ್ ಅರೆಸ್ಟ್: ಯುಎಸ್ಎ ಪ್ರಜೆಗಳಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ವಂಚಿಸುತ್ತಿದ್ದ ಜಾಲವೊಂದು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಆಗ್ನೇಯ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸೈಬರ್ ವಂಚನೆಗಾಗಿಯೇ Cybits Solutions Pvt.Ltd ಹೆಸರಿನಲ್ಲಿ ನಕಲಿ ಬಿಪಿಒ ಕಂಪನಿ ತೆರೆದು ವಂಚಿಸುತ್ತಿದ್ದ 16 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಎಸ್ಎ, ಕೆನಡಾ ಮತ್ತಿತರ ಕೆಲ ದೇಶಗಳಿಗೆ ಆನ್ಲೈನ್ನಲ್ಲಿ ಮಾಹಿತಿ ಸೇವೆ ಒದಗಿಸುವ ಕಂಪನಿ ಎಂದು ಆರೋಪಿಗಳು ಹೇಳಿಕೊಂಡು, ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವುದಾಗಿ ಆಮಿಷವೊಡ್ಡಿ ಅನ್ಯ ರಾಜ್ಯಗಳ ಯುವಕ-ಯುವತಿಯರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅವರಿಗೆ ಹೆಚ್ಎಸ್ಆರ್ ಲೇಔಟ್, ಬಿಟಿಎಂ ಲೇಔಟ್ನಲ್ಲಿ ವಾಸಕ್ಕೆ ಮನೆ, ಊಟದ ವ್ಯವಸ್ಥೆ ಹಾಗೂ ಸಂಚರಿಸಲು ಕ್ಯಾಬ್ಗಳ ವ್ಯವಸ್ಥೆಯನ್ನೂ ಸಹ ನೀಡುತ್ತಿದ್ದರು. ಮೂರು ವಾರಗಳ ಕಾಲ ಟೆಲಿಕಾಲಿಂಗ್ ತರಬೇತಿ ನೀಡುತ್ತಿದ್ದರು. ನಂತರ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಕೆಯೊಡ್ಡಿ ವಂಚಿಸಲು ಬಳಸಿಕೊಳ್ಳುತ್ತಿದ್ದರು. ಈ ಕೃತ್ಯಕ್ಕಾಗಿ ಆನ್ಲೈನ್ ಮೂಲಕ ಯುಎಸ್ ಪ್ರಜೆಗಳ ನಂಬರ್ ಮತ್ತು ಇತರ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿಗಳು, ಲೈವ್ ಸರ್ವರ್ ಬಳಸಿ ಕರೆ ಮಾಡಿಸುತ್ತಿದ್ದರು. ನಕಲಿ ಅರೆಸ್ಟ್ ವಾರೆಂಟ್, ನಕಲಿ ಪೊಲೀಸ್ ಐಡಿಗಳನ್ನು ತೋರಿಸಿ ಬಂಧನದಿಂದ ರಕ್ಷಿಸಲು ಹಣಕ್ಕೆ ಬೇಡಿಕೆಯಿಟ್ಟು ಕಂಪನಿಯ ವ್ಯಾಲೆಟ್/ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7