ಮಂಡ್ಯ: ಕನ್ನಡ ನಾಡಿನ ಜೀವನದಿ, ಧಾರ್ಮಿಕ, ಸಾಂಸ್ಕೃತಿಯ ಪ್ರತೀಕವಾಗಿರುವ ಕಾವೇರಿ ನದಿಗೆ ಪ್ರಪ್ರಥಮ ಬಾರಿಗೆ “ಕಾವೇರಿ ಆರತಿ” ನೆರವೇರಿತು. ಕಾವೇರಮ್ಮನ ಒಡಲು ಸದಾ ತುಂಬಿರಬೇಕು. ಕೆಆರ್ಎಸ್ ವರ್ಷ ಪೂರ್ತಿ ಭರ್ತಿಯಾಗಿರಬೇಕು. ನಾಡು ಸುಖ, ಶಾಂತಿ ಸಮೃದ್ಧಿಯಿಂದ ಕೂಡಿರಲೆಂದು ಡಿ.ಕೆ.ಶಿವಕುಮಾರ್ ಅವರು ಕಾವೇರಿ ಮಾತೆಗೆ ಆರತಿ ಬೆಳಗಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.
ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡಿ, ತಾಯಿ ಕಾವೇರಿಗೆ ಆರತಿ ಬೆಳಗಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು.
ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಶಂಖನಾದ, ಡೊಳ್ಳು, ನಗಾರಿ ಸದ್ದು, ವೇದ ಮಂತ್ರಗಳ ಪಠಣದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನೆರವೇರಿದ ಕಾವೇರಿ ಆರತಿ ನೆರದಿದ್ದವರನ್ನು ಮೂಕವಿಸ್ಮತರನ್ನಾಗಿಸಿತು. ಒಂದು ಕ್ಷಣ ಪ್ರವಾಸಿಗರಿಗೆ ಕಾಶಿಯೇ ಕಣ್ಣ ಮುಂದೆ ಹಾದುಹೋದಂತಹ ಅನುಭವ.
Laxmi News 24×7