ಬೆಂಗಳೂರು: ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಿ ಕರೆತರುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಲಘಟ್ಟಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೆಹಬೂಬ್ ಗುಡ್ಡಹಳ್ಳಿ (40) ಸಾವನ್ನಪ್ಪಿದ ಅಧಿಕಾರಿ.
ಜೂನ್ 24ರಂದು ನಸುಕಿನ 2:30ರ ಸುಮಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯನಗರ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಮೆಹಬೂಬ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಮಾದಕ ಪದಾರ್ಥಗಳ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಾಗ ಮೆಹಬೂಬ್ ಅವರ ಕಾರಿಗೆ ಟ್ರಕ್ ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದ.
ಮತ್ತೊಂದೆಡೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳ ಪೈಕಿ ಸಯೀದ್ ವಾಸಿಂ ಮತ್ತು ಸಯೀದ್ ಅಮೀರ್ ಎಂಬ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಅಪಘಾತದಿಂದ ಪಕ್ಕೆಲುಬು ಮುರಿತ ಸೇರಿದಂತೆ ತೀವ್ರ ಗಾಯಗೊಂಡಿದ್ದ ಪಿಎಸ್ಐ ಮೆಹಬೂಬ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರುಳಿನ ಸೋಂಕು ಕಾಣಿಸಿಕೊಂಡಾಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಶನಿವಾರ (ಜೂನ್ 28ರಂದು) ಮೆಹಬೂಬ್ ಸಾವನ್ನಪ್ಪಿದ್ದಾರೆ