ರಾಯಚೂರು: ಕೃಷ್ಣಾ ನದಿ ಮೇಲ್ಭಾಗದಲ್ಲಿ ಮಳೆಯ ಸುರಿಯುತ್ತಿರುವುದರಿಂದ ನಾರಾಯಣಪುರ (ಬಸವಸಾಗರ) ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಸಾವಿರಾರು ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇದೆ. ಹೀಗಾಗಿ, ಕೃಷ್ಣಾ ನದಿಗೆ 84,445 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಪರಿಗಣಿಸಿದರೆ ನಾರಾಯಣಪುರ ಅಣೆಕಟ್ಟೆಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆಯಿದೆ. ಮಧ್ಯಾಹ್ನ 3.00 ಗಂಟೆ ನಂತರ, ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ನಿಂದ 1,10,000 ಕ್ಯೂಸೆಕ್ಗೆ ಹಂತ – ಹಂತವಾಗಿ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.ಡ್ಯಾಂಗೆ ಒಳಹರಿವಿನ ಅನುಸಾರ ನದಿಗೆ ಬಿಡುತ್ತಿರುವ ಹೊರಹರಿವನ್ನು ಕ್ರಮೇಣ ಹೆಚ್ಚಿಸಲಾಗುವುದು, ಇಲ್ಲವೇ ಕಡಿಮೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕಿನ ಬರುವ ನದಿ ಪಾತ್ರದ ಗ್ರಾಮದ ಜನರು ಹಾಗೂ ಜಾನುವಾರುಗಳ ರಕ್ಷಣೆ ಕುರಿತಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ.