ಕುಮಾರಸ್ವಾಮಿ ವಿರುದ್ಧದ ಅಪಪ್ರಚಾರದಿಂದ ಯಾರೂ ಗೆದ್ದಿಲ್ಲ,
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರದಲ್ಲಿ ಅವರು ಯಾರೂ ಗೆಲುವು ಕಂಡಿಲ್ಲ, ಕಾಣುವುದೂ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗುಡುಗಿದರು.
ಜನರೊಂದಿಗೆ ಜನತಾದಳ ಎಂಬ ಹೆಸರಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ʼಮಿಸ್ ಕಾಲ್ʼ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮ ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಭಾನುವಾರ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಕೆಲವರು ಬಹಳ ಯಾತನೆ ಕೊಡುತ್ತಿದ್ದಾರೆ. ಅವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಅವರಿಂದ ಆಗಿಲ್ಲ, ಆಗುವುದೂ ಇಲ್ಲ. ಕೇವಲ ಆರೋಪ ಮಾಡಿಕೊಂಡೇ ಅವರೆಲ್ಲ ಸೋಲುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರನ್ನು ಕೆಲವರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಅವರ ವ್ಯಕ್ತಿತ್ವ, ಜನಪ್ರಿಯತೆಯನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ರೈತರ ಸಾಲ ಮನ್ನಾ ಮಾಡಿದಂತೆ ದೇಶದಲ್ಲಿ ಯಾರೂ ಸಾಲ ಮನ್ನಾ ಮಾಡಿದ್ದನ್ನು ನಾನು ನೋಡಿಲ್ಲ ಎಂದರು.