ಪುತ್ತೂರು(ಡಿಸೆಂಬರ್.16): ನಗರ ಪ್ರದೇಶವಾಗಿ ಬೆಳೆಯುತ್ತಿರುವ ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ, ಕಳ್ಳತನ ಪ್ರಕರಣಗಳೂ ಹೆಚ್ಚಾಗಲಾರಂಭಿಸಿದೆ. ಹಾಡುಹಗಲೇ ಕಾರುಗಳ ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ, ಕಳ್ಳರನ್ನು ಪತ್ತೆ ಹಚ್ಚಲು ಮಾತ್ರ ಪೋಲೀಸರು ವಿಫಲರಾಗುತ್ತಿದ್ದಾರೆ. ಇಂಥಹ ಅಪರಾಧ ಕೃತ್ಯಗಳ ತಡೆಗೆಂದೇ ಪುತ್ತೂರು ನಗರದ ಸುತ್ತಮತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಅವುಗಳಲ್ಲಿ ಹಲವು ಇದೀಗ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದ್ದು, ಕಳ್ಳತನ, ಹಿಟ್ ಅಂಡ್ ರನ್ ಪ್ರಕರಣಗಳನ್ನು ಪತ್ತೆ ಹಚ್ಚಲು ಮುಂದಿನ ದಿನಗಳಲ್ಲಿ ಇದು ಸಹಕಾರಿಯಾಗಲಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರನ್ನು ಹೊರತುಪಡಿಸಿದರೆ, ಪುತ್ತೂರು ಎರಡನೇ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರವಾಗಿ ಬೆಳೆಯುತ್ತಿದ್ದಂತೆ ಅಪರಾಧ ಕೃತ್ಯಗಳೂ ಈ ಭಾಗದಲ್ಲಿ ಹೆಚ್ಚೆಚ್ಚು ಸಂಭವಿಸುತ್ತಿದೆ. ಅದರಲ್ಲೂ ಕಳ್ಳತನ, ವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ.
ಇಂಥಹ ಕೃತ್ಯಗಳು ಸಂಭವಿಸಿದ ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುವ ಸಿಸಿ ಕ್ಯಾಮೆರಾಗಳನ್ನು ಪುತ್ತೂರು ನಗರದಾದ್ಯಂತ ಅಳವಡಿಸಲಾಗಿದೆ. ಆದರೆ ಈ ಕ್ಯಾಮರಾಗಳಲ್ಲಿ ಕೆಲವು ಮಾತ್ರವೇ ಕಾರ್ಯಾಚರಿಸುತ್ತಿದೆ. ಸರಿಯಾದ ನಿರ್ವಹಣೆಯಿಲ್ಲದ ಕಾರಣ ಸಿಸಿ ಕ್ಯಾಮೆರಾಗಳು ಇದ್ದೂ, ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.