ಚಿಕ್ಕೋಡಿ:ಗ್ರಾಮಗಳು ಅಭಿವೃದ್ಧಿಯಾಗಲೆಂದು ಸರ್ಕಾರಗಳು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತವೆ. ಆದರೆ ಗ್ರಾಮಗಳು ಮಾತ್ರ ಇನ್ನೂ ವರೆಗೂ ಅಭಿವೃದ್ಧಿ ಆಗುವ ಲಕ್ಷಣಗಳು ಕಾಣುತ್ತಿಲ್ಲ,ಇಲ್ಲೊಂದು ಗ್ರಾಮದ ಜನರು ಮೂಲಸೌಲಭ್ಯಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಆ ಗ್ರಾಮ ಯಾವುದು ಅಂತೀರಾ ಹಾಗಾದ್ರೆ ಈ ಸ್ಟೋರಿಯನ್ನು ನೋಡಿ
ಸಮರ್ಪಕ ರಸ್ತೆ ಇಲ್ಲದೆ ಕಲ್ಲು ಮುಳ್ಳಿನಲ್ಲಿ ಓಡಾಡುತ್ತಿರುವ ಗ್ರಾಮಸ್ಥರು, ಸಮರ್ಪಕ ಚರಂಡಿ ಇಲ್ಲದೆ ಗಬ್ಬು ವಾಸನೆ ಹೊಡೆಯುತ್ತಿರುವ ಗ್ರಾಮ, ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸುತ್ತಿರುವ ಮಹಿಳೆಯರು ಹೌದು ಹೀಗೊಂದು ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ನವಗ್ರಾಮದ ಅಂಬೇಡ್ಕರ್ ನಗರದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಇಲ್ಲಿ ನೂತನವಾಗಿ ನವಗ್ರಾಮವನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಈ ನವಗ್ರಾಮದಲ್ಲಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಬಾವಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೆ ಸಮರ್ಪಕ ರಸ್ತೆವಿಲ್ಲದೆ ಜನರು ಕಲ್ಲು,ಮುಳ್ಳು, ಗಿಡ ಗಂಟೆಗಳಲ್ಲಿ ಓಡಾಡುವ ಶೋಚನೀಯ ಪರಿಸ್ಥಿತಿ ಇವರದಾಗಿದೆ. ಅದಲ್ಲದೆ ಚರಂಡಿಗಳಿಲ್ಲದೆ ನೀರು ಮುಂದಕ್ಕೆ ಹೋಗದೆ ಅಲ್ಲಿಯೇ ನೀರು ನಿಂತು ರೋಗುರುಜನೆಗಳು ಹರಡುವ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ.