ಹಾವೇರಿ: ರಾಜ್ಯಾದ್ಯಂತ ಮತ್ತೆ ವರುಣನ (Rain) ಆರ್ಭಟ ಮುಂದುವರೆದಿದೆ. ಕೆಲ ದಿನಗಳಷ್ಟು ಬಿಡುವು ನೀಡಿದ್ದ ಮಳೆ ಈಗ ಮತ್ತೆ ಸುರಿಯುತ್ತಿದ್ದು, ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗುತ್ತಿದೆ. ಇನ್ನು ಗುಡುಗು (Thunder) ಸಹಿತ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮಳೆ ಜೊತೆಗೆ ವಿಪರೀತ ಗಾಳಿ ಬೀಸುತ್ತಿರುವುದರಿಂದ ಮರಗಳು (Tree) ಧರೆಗುರುಳಿದೆ. ಮಳೆ ರಾಯನ ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಇನ್ನು ರಾಜ್ಯದ ಹಲವೆಡೆ ಮಳೆ ಧಾರಾಕಾರ ಹೊಯ್ಯುತ್ತಿದ್ದು, ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಹಾವೇರಿಯಲ್ಲಿ ವರುಣನ ಆರ್ಭಟಕ್ಕೆ ನಲುಗಿದ ಜನ!
ರಾಜ್ಯದ ಅನೇಕ ಕಡೆ ಮಳೆರಾಯನ ಅಬ್ಬರ ಜೋರಾಗಿದೆ. ಹಾವೇರಿಯಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಜನರು ಪರದಾಡುವಂತಾಗಿದೆ. ಇನ್ನು ವರುಣ ಅಬ್ಬರಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋ ಒಂದು ಕೊಚ್ಚಿ ಹೋಗಿದೆ. ಈ ಘಟನೆ ನಗರದ ನಾಗೇಂದ್ರನಮಟ್ಟಿಯ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಮಳೆ ವಿಪರೀತವಾಗಿ ಹೊಡೆಯುತ್ತಿದ್ದು, ಮಳೆ ಅವಾಂತರಕ್ಕೆ ಜನ ಕಂಗಾಲಾಗಿದ್ದಾರೆ.
ಪ್ರಾಣದ ಹಂಗು ತೊರೆದ ಆಟೋ ಚಾಲಕ
ಇನ್ನು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ಆಟೋ ಮುಳುಗಡೆಯಾಗಿದೆ. ನಾಗರಾಜ್ ಕೊಳಚಿ ಎಂಬುವವರಿಗೆ ಸೇರಿದ ಹೊಸ ಆಟೋ ಇದಾಗಿದ್ದು, ಆಟೋದಲ್ಲಿ ಓರ್ವ ಮಗು ಸೇರಿದಂತೆ ಮಹಿಳೆ ಇದ್ದರು. ಆಟೋ ಚಾಲಕ ಜೀವದ ಹಂಗು ತೊರೆದು ಅವರಿಬ್ಬರ ಪ್ರಾಣವನ್ನು ಕಾಪಾಡಿದ್ದಾನೆ. ಈ ಆಟೋ ಸಿಟಿಯಿಂದ ನಾಗೇಂದ್ರನಮಟ್ಟಿಗೆ ತೆರಳುತ್ತಿತ್ತು. ಮಳೆ ರಭಸಕ್ಕೆ ಆಟೋ ಸುಮಾರು ಎರಡು ನೂರು ಮೀಟರ್ನಷ್ಟು ದೂರ ತೆಲಿ ಹೋಗಿತ್ತು.
ಮಳೆ ಅವಾಂತರಕ್ಕೆ ಜನ ತತ್ತರ
ಕಳೆದ ಒಂದು ಗಂಟೆಯಿಂದ ಸತತವಾಗಿ ಸುರಿಯುತ್ತಿರೋ ಮಳೆರಾಯ ಅನೇಕ ಅನಾಹುತಗಳನ್ನು ಸೃಷ್ಟಿಸಿದೆ. ಮಳೆಯ ಆರರ್ಭಟಕ್ಕೆ ಅನೇಕ ಅನಾಹುತಗಳು ನಡೆದಿದ್ದು, ಘಟನಾ ಸ್ಥಳಕ್ಕೆ ನಗರಸಭೆಯ ಅಧ್ಯಕ್ಷೆ ಶಶಿಕಲಾ ಮಾಳಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೂ ಆಟೋ ಕಳೆದುಕೊಂಡ ನಾಗರಾಜ್ ಅವರಿಗೆ ಧೈರ್ಯ ತುಂಬಿದ್ದಾರೆ. ಹಾಗೂ ಮಳೆಯಿಂದ ಅನಾಹುತಕ್ಕೀಡಾದವರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.