ಬೆಳಗಾವಿ: ಗೃಹ ರಕ್ಷಕ ಇಲಾಖೆಯ ಬೆಳಗಾವಿ ಜಿಲ್ಲಾ ಕಮಾಂಡೆಂಟ್ ಆಗಿದ್ದ ಕಿರಣ ಆರ್. ನಾಯ್ಕ ಅವರ ಮೇಲಿನ ಆರೋಪಗಳು ಸುಳ್ಳು ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ. ಅಲ್ಲದೇ, ಅಮಾನತು ಆದೇಶ ರದ್ದು ಮಾಡಿ ಅವರಿಗೆ ಮತ್ತೆ ಜಿಲ್ಲಾ ಕಮಾಂಡೆಂಟ್ ಹುದ್ದೆ ನೀಡಬೇಕು ಎಂದೂ ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಗೃಹ ರಕ್ಷಕ ದಳದ ಡಿಜಿಪಿ ಅವರಿಗೆ ನಿರ್ದೇಶನ ನೀಡಿದೆ.
ಕಿರಣ ಅವರು 2023ರ ಡಿಸೆಂಬರ್ನಲ್ಲಿ ಗೃಹ ರಕ್ಷಕ ದಳ ಇಲಾಖೆಯ ಜಿಲ್ಲಾ ಕಮಾಂಡೆಂಟ್ ಆಗಿದ್ದರು. ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರುಪಯೋಗದ ಆರೋಪ ಮಾಡಿ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳ ಅವರ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸುವ ಮುನ್ನವೇ ಸರ್ಕಾರ ಅವರನ್ನು ಗೃಹ ಇಲಾಖೆ ಗೌರವ ಹುದ್ದೆಯಿಂದ ಅಮಾನತು ಮಾಡಿತ್ತು.
ಇದನ್ನು ಪ್ರಶ್ನಿಸಿ ಕಿರಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಆರೋಪಕ್ಕೆ ತಕ್ಕ ಸಾಕ್ಷ್ಯಗಳು, ಸಾಕ್ಷಿಗಳು ಇಲ್ಲ. ಇದೊಂದು ಸುಳ್ಳು ಆರೋಪ. ನಿಷ್ಕಾಮ ಸೇವೆ ಮಾಡುವ ಅಧಿಕಾರಿಗಳನ್ನು ಗೌರವ ದಿಂದ ನಡೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
Laxmi News 24×7