ಕಿಕ್ಕೇರಿ: ದೇಗುಲ ಶುಚಿಗೊಳಿಸಿದ ವಿದ್ಯಾರ್ಥಿಗಳು
ಕಿಕ್ಕೇರಿ: ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲದ ಹೊರಾಂಗಣ, ಗೋಪುರದಲ್ಲಿ ಬೇರು ಬಿಟ್ಟಿದ್ದ ಗಿಡಗಂಟಿಗಳನ್ನು ಬುಧವಾರ ತೆರವು ಮಾಡುವ ಮೂಲಕ ಕಿಕ್ಕೇರಿಯ ಸರ್ಕಾರಿ ಪಿಯು ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಮಾದರಿಯಾದರು.
ಮುಳ್ಳುಗಿಡ, ಕುರುಚಲು ಗಿಡ, ಆಲದಮರ ಟಿಸಿಲೊಡೆದು ದೇಗುಲಕ್ಕೆ ಅಪಾಯವೊಡ್ಡುವಂತಿತ್ತು.
ದೇಗುಲದ ಸ್ಥಿತಿ ಕುರಿತು ಅರ್ಚಕ ಆದಿತ್ಯ ಅವರ ಮನವಿಗೆ ಸ್ಪಂದಿಸಿ 40 ಕ್ಕೂ ಹೆಚ್ಚು ಉಪನ್ಯಾಸಕರು , ವಿದ್ಯಾರ್ಥಿಗಳು ಶುಚಿತ್ವಕ್ಕೆ ಕೈಜೋಡಿಸಿದರು. ಕುಡುಗೋಲು, ಹಾರೆ, ಪಿಕಾಸಿ, ಗುದ್ದಲಿ, ಪೊರಕೆ, ಬಾಂಡಲಿಗಳನ್ನು ಹಿಡಿದು ಮುಳ್ಳಿನ ಪೊದೆಗಳನ್ನು ಕಡಿದು ಒಪ್ಪಗೊಳಿಸಿದರು. ಗುಂಡಿ ಬಿದ್ದ ಸ್ಥಳವನ್ನು ಸಮತಟ್ಟು ಮಾಡಿದರು. ಕಲ್ಯಾಣಿಯಲ್ಲಿನ ನೀರಿನಿಂದ ತೊಳೆದು ಶುಚಿಗೊಳಿಸಿದರು. ದೇಗುಲದ ಬ್ರಹ್ಮೇಶ್ವರ, ಕಾಲಭೈರವೇಶ್ವರ, ಪಾರ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ಉತ್ತಮ ಶಿಕ್ಷಣ ಭವಿಷ್ಯಕ್ಕೆ ಪ್ರಾರ್ಥಿಸಿದರು.
ಪ್ರಾಂಶುಪಾಲ ಎನ್. ದೊರೆಸ್ವಾಮಿ, ಎನ್ಎಸ್ಎಸ್ ಘಟಕಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಉಪನ್ಯಾಸಕರಾದ ಎನ್. ರವೀಂದ್ರ, ಎ.ಎಂ. ಮಂಜುನಾಥ್, ನಾಗೇಶ, ರಮೇಶ್, ಜಿ. ವಿನಾಯಕ, ಅರ್ಚಕ ಆದಿತ್ಯ ಭಾರದ್ವಾಜ್ ಭಾಗವಹಿಸಿದ್ದರು.