ದೇವರಹಿಪ್ಪರಗಿ: ತಾಲ್ಲೂಕಿನ ಕಡ್ಲೇವಾಡ ಗ್ರಾಮದ ಪಿಸಿಎಚ್ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣ ಬುಧವಾರ ಸುರಿದ ಮಳೆಯ ನೀರಿನಿಂದ ಆವೃತವಾಗಿದ್ದು, ತರಗತಿ, ಪಠ್ಯ ಚಟುವಟಿಕೆಗಳಿಗೆ ತೊಂದರೆಯಾಯಿತು.
ನಾಲ್ಕು ಕೊಠಡಿಗಳ ಚಾವಣಿಯಿಂದ ನೀರು ಸೋರುತ್ತಿದ್ದರಿಂದ ಪಾಠಗಳು ನಡೆಯದಂತಾದವು.
ಶಿಕ್ಷಕರು ಮಕ್ಕಳೊಂದಿಗೆ ಸೇರಿ ಆವರಣದ ನೀರು ಖಾಲಿ ಮಾಡಲು ಹರಸಾಹಸಪಟ್ಟರು.
ಸಮಸ್ಯೆ ಕುರಿತಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಮಕ್ಕಳು ಈ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಮಕ್ಕಳ ಪಾಲಕರು ಹೇಳಿದರು.
ಸ್ಥಳೀಯ ಆಡಳಿತ ಶಾಲಾ ಆವರಣದಲ್ಲಿ ಮಳೆನೀರು ನಿಲ್ಲದಂತೆ ಹಾಗೂ ಕೊಠಡಿಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಂಡು ಮಕ್ಕಳ ಕಲಿಕೆಗೆ ಸಹಕಾರ ನೀಡಬೇಕು ಎಂದು ಪಾಲಕರಾದ ಸಾಯಿಕುಮಾರ ಬಿಸನಾಳ, ವಿಠ್ಠಲ ದೇಗಿನಾಳ, ಅಶೊಕ ಸೂಳಿಭಾವಿ, ಮಲ್ಲು ಸವುಳಿ, ಶಿವಪ್ಪ ಉತ್ನಾಳ, ಗುರುನಾಥ ಗೌಂಡಿ, ದಸ್ತಗೀರಸಾಬ್ ಮುಲ್ಲಾ, ಕಾಂತು ಕನ್ನೋಳ್ಳಿ ಆಗ್ರಹಿಸಿದರು.