ಬೆಂಗಳೂರು:ರಾಜ್ಯಕ್ಕೆ ಪ್ರತಿ ತಿಂಗಳು ಕೆಜಿಗೆ 28 ರೂ.ನಂತೆ 2.36 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 2025ರ ಮಾರ್ಚ್ವರೆಗೆ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಆಸೆ ಈಡೇರುವ ಕಾಲ ಸನ್ನೀಹಿತವಾಗಿದೆ.
ಆಹಾರ ಇಲಾಖೆ ಕಳುಹಿಸಿರುವ ಪ್ರಸ್ತಾವನೆಗೆ ಭಾರತೀಯ ಆಹಾರ ನಿಗಮ ( ಎಫ್ಸಿಐ) ಒಪ್ಪಿಗೆ ಕೊಟ್ಟಿದೆ. ಹೀಗಾಗಿ, ಶ್ರೀದಲ್ಲೇ ಈ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬದಲು ಉಚಿತವಾಗಿ ಅಕ್ಕಿ ದೊರೆಯಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ತಕ್ಷಣವೇ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಅದರಂತೆ ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದರಾದರೂ, ಅಕ್ಕಿ ಸಿಕ್ಕಿರಲಿಲ್ಲ. ಅಕ್ಕಿ ನೀಡುವಂತೆ ಕೇಂದ್ರದ ಬಳಿ ಅಂಗಲಾಚಿದ್ದರು. ವಿವಿಧ ರಾಜ್ಯಗಳ ಸಿಎಂಗೆ ಮನವಿ ಸಲ್ಲಿಸಿದ್ದರು. ಸಾಕಷ್ಟು ಪ್ರಯತ್ನಪಟ್ಟರೂ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಸಿಗಲಿಲ್ಲ. ಇದಕ್ಕಾಗಿ ಕೇಂದ್ರ&ರಾಜ್ಯಗಳ ನಡುವೆ ಅಕ್ಕಿಗಾಗಿ ದೊಡ್ಡ ಜಟಾಪಟಿಯೂ ನಡೆಯಿತು. ಅಂತಿಮವಾಗಿ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿತ್ತು.
144 ಕೋಟಿ ರೂ.ಉಳಿತಾಯ
ರಾಜ್ಯ ಸರ್ಕಾರ, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ಗಳನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕುತ್ತಿದೆ. ಅಂತ್ಯೋದಯ ಕಾರ್ಡ್ನಲ್ಲಿ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ., ಐದು ಸದಸ್ಯರಿದ್ದರೆ 510 ರೂ., ಆರು ಸದಸ್ಯರಿದ್ದರೆ 850 ರೂ.,ಗಳನ್ನು ಹಾಕಲಾಗುತ್ತಿದೆ. ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಒಟ್ಟು ಒಂದು ಕೋಟಿ ಕಾರ್ಡ್ಗಳಿಗೆ 450-500 ಕೋಟಿ ರೂ.ಜಮೆ ಮಾಡಲಾಗುತ್ತದೆ.ಇದೀಗ ಕೇಂದ್ರದಿಂದ ಪ್ರತಿ ಕೆಜಿ ಅಕ್ಕಿಗೆ 28 ರೂ.ನಂತೆ ಸರಬರಾಜು ಮಾಡಲು ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ಕೆಜಿಗೆ 6 ರೂ. ಉಳಿತಾಯವಾಗಲಿದೆ. ಪ್ರತಿ ತಿಂಗಳು 12 ಕೋಟಿ ರೂ.ನಂತೆ ವರ್ಷಕ್ಕೆ 144 ಕೋಟಿ ರೂ. ಉಳಿತಾಯವಾಗಲಿದೆ.