ಮುಧೋಳ : ಘಟಪ್ರಭಾ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುಧೋಳದ ರಾಜ್ ಘಾಟ್ ಮುಕ್ತಿಧಾಮ ಸೋಮವಾರ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಮುಧೋಳ ನಗರ ಸೇರಿ ತಾಲೂಕಿನ ಮಿರ್ಜಿ, ಮಳಲಿ, ಮಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಯಾದವಾಡ-ಮುಧೋಳ ಸೇತುವೆ ಮೇಲೆ ನೀರಿನಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು ನದಿನೀರು ವೀಕ್ಷಣೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ನದಿದಡದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿದೆ.
ಮುಧೋಳ ಲೋಕಾಪುರ ರಾಜ್ಯ ಹೆದ್ದಾರಿಯಲ್ಲಿರುವ ಚಿಂಚಖಂಡಿ ಸೇತುವೆ ಮುಳುಗಡೆಗೆ ಕೇವಲ ಎರಡು ಅಡಿ ಬಾಕಿಯಿದ್ದು, ನೀರಿನ ಹರಿವು ಇದೇ ರೀತಿ ಮುಂದುವರಿದರೆ ಸಂಜೆವೇಳೆಗೆ ಮುಳುಗುವ ಸಂಭವವಿದೆ. ಸೇತುವೆ ಮುಳುಗಡೆಯಾದರೆ ತೀವ್ರ ತೊಂದರೆಯುಂಟಾಗಲಿದ್ದು ಪ್ರಯಾಣಿಕರು ಬದಲಿ ಮಾರ್ಗ ಅನುಸರಿಸುವ ಅನಿವಾರ್ಯತೆ ಉಂಟಾಗಲಿದೆ.
ಶಾಲೆಗೆ ನುಗ್ಗಿದನೀರು: ಮುಧೋಳ ನಗರದ ಕುಂಬಾರ ಓಣಿಯಲ್ಲಿರುವ ಉರ್ದು ಶಾಲೆಗೆ ಸೋಮವಾರ ಬೆಳಗ್ಗೆ ನೀರು ನುಗ್ಗಿದ್ದು ಶಾಲಾ ಮಕ್ಕಳು ತರಗತಿಗೆ ತೆರಳಲು ತೀವ್ರ ತೊಂದರೆಯುಂಟಾಗಲಿದೆ.
ಕಾಳಜಿ ಕೇಂದ್ರ ಸ್ಥಳಾಂತರ: ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ಥರಿಗಾಗಿ ನಿರ್ಮಿಸಿದ್ದ ಕಾಳಜಿ ಕೇಂದ್ರಕ್ಕೆ ನೀರು ನುಗ್ಗುವ ಭೀತಿ ಉಂಟಾಗಿದ್ದು ಕಾಳಜಿ ಕೇಂದ್ರವನ್ನು ಸ್ಥಳಾಂತರಿಸಿ ಅಲ್ಲಿನ ಸಂತ್ರಸ್ಥರಿಗೆ ಹೊಸ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.