ಆನಂದಪುರ: ಮದುವೆ ಆಗುವಂತೆ ಕೇಳಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿ ಸಮೀಪದ ಮುಂಬಾಳು ಗ್ರಾಮದ ರೈಲ್ವೆ ಹಳಿ ಪಕ್ಕ ಶವ ಹೂತು ಹಾಕಿದ್ದ ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
ಕೊಪ್ಪ ತಾಲ್ಲೂಕಿನ ಗುಣವಂತೆಯ ನರ್ಸಿಂಗ್ ವಿದ್ಯಾರ್ಥಿನಿ ಸೌಮ್ಯಾ (27) ಕೊಲೆಯಾದವರು.
ಸಾಗರ ತಾಲ್ಲೂಕಿನ ತಾಳಗುಪ್ಪದ ಸೃಜನ್ ಆರೋಪಿ ಯುವಕ.
ತೀರ್ಥಹಳ್ಳಿಯ ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸೌಮ್ಯಾರನ್ನು ಪ್ರೀತಿಸಿದ್ದ. ಯುವತಿಯ ತಾಯಿ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದರಿಂದ ವಸೂಲಿಗೆ ತೆರಳಿದ್ದ ಈತನಿಗೆ ಸೌಮ್ಯಾ ಪರಿಚಯ ಆಗಿದ್ದರು. ನಂತರ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು.
ಪ್ರೀತಿಯ ವಿಷಯ ತನ್ನ ತಾಯಿಗೂ ಹೇಳಿ ಮದುವೆಗೆ ಒಪ್ಪಿಗೆ ಪಡೆದಿದ್ದ ಸೌಮ್ಯಾ ಮದುವೆಯಾಗುವಂತೆ ಪ್ರಿಯಕರನನ್ನು ಒತ್ತಾಯಿಸುತ್ತಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಮದುವೆಗೆ ತನ್ನ ಮನೆಯಲ್ಲಿ ಪಾಲಕರು ಒಪ್ಪುವುದಿಲ್ಲ ಎಂದು ಸೃಜನ್ ಹೇಳುತ್ತಿದ್ದ. ಇದರಿಂದ ಮನನೊಂದು ಸೌಮ್ಯಾ ವರ್ಷದ ಹಿಂದೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ವರ್ಷದ ನಂತರ ಮದುವೆ ಆಗುವುದಾಗಿ ಸೌಮ್ಯಾ ಮನೆಯವರಿಗೆ ಸೃಜನ್ ಭರವಸೆ ನೀಡಿದ್ದ ಎನ್ನಲಾಗಿದೆ.