ಹುಬ್ಬಳ್ಳಿ, ಜೂ.08: ಮೇ.15 ರಂದು ಮನೆಗೆ ನುಗ್ಗಿ ಅಂಜಲಿ ಹತ್ಯೆ ಪ್ರಕರಣ (Anjali Ambigera Murder Case)ಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು,
ಅಂಜಲಿ ಕೊಲೆಯಲ್ಲಿ ವಿಜಯ್ ಅಲಿಯಾಸ್ ಈರಣ್ಣನ ಪಾತ್ರ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ನೇಹಾ ತಂದೆ ನಿರಂಜನ ಹಿರೇಮಠ ಅವರ ಆಪ್ತ ಸಹಾಯಕನಾಗಿರುವ ವಿಜಯ್ ಮೇಲೆ ಅಂಜಲಿ ಸಹೋದರಿಯ ಪತಿಯಾದ ಶಿವಕುಮಾರ್ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಬಸವನಗರದಲ್ಲಿ ಹಲ್ಲೆಗೆ ಯತ್ನಿಸಿದ್ದ.
ಈ ಕುರಿತು ವಿಜಯ್ ಶಿವಕುಮಾರ್ ವಿರುದ್ದ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ.
ವಿಜಯ್ ಬಂಧಿಸಲು ಅಂಜಲಿ ಸಹೋದರಿ ಯಶೋಧಾ ಆಗ್ರಹ
ಇನ್ನು ವಿಜಯ್ನನ್ನು ಕೂಡ ಅರೆಸ್ಟ್ ಮಾಡಬೇಕೆಂದು ಅಂಜಲಿ ಸಹೋದರಿ ಯಶೋಧಾ ಆಗ್ರಹಿಸಿದ್ದರು.
ಇದೀಗ ವಿಜಯ್ ಅಂಗಡಿಗೆ ಹೋದಾಗ ಬೈಕ್ ಅಡ್ಡಗಟ್ಟಿದ ಶಿವಕುಮಾರ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ವಿಜಯ್ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದ. ಈ ಹಿನ್ನಲೆ ಸೆಕ್ಷನ್ 341,504 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ, ಹಲ್ಲೆಗೆ ಮುಂದಾಗಿದ್ದ ಶಿವಕುಮಾರ್ನನ್ನ ಪೊಲೀಸರು ಬಂಧಿಸಿದ್ದಾರೆ.
ಇದರ ಜೊತೆಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಕುಮಾರ್ ವಿರುದ್ದ ಕಳ್ಳತನ ಪ್ರಕರಣವು ದಾಖಲಾಗಿದ್ದು, ಶಿವಕುಮಾರ್ ವಿರುದ್ದ ಪೊಲೀಸರು ವಾರೆಂಟ್ ಕೂಡ ಹೊರಡಿಸಿದ್ದರು.