ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಜೂ. 8ರಿಂದ 11ರ ವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಜೂ. 2ರಂದು ಮುಂಗಾರು ಆಗಮಿಸಿತ್ತಾದರೂ ಬಳಿಕದ ದಿನಗಳಲ್ಲಿ ಭಾರೀ ಮಳೆ ಸುರಿಯಲಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ದ.ಕ. ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.ಮಂಗಳೂರು ನಗರದಲ್ಲಿ ಶುಕ್ರವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನವರೆಗೆ ಮಳೆ ಮುಂದುವರೆದಿತ್ತು. ಬಳಿಕ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸುಳ್ಯದಲ್ಲಿ ಮಧ್ಯಾಹ್ನ ಬಳಿಕ ಧಾರಾಕಾರ ಮಳೆ ಸುರಿದಿದೆ. ಉಳ್ಳಾಲ, ಬಂಟ್ವಾಳ, ಸುಬ್ರಹ್ಮಣ್ಯ, ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದೆ.
ಗರಿಷ್ಠ-ಕನಿಷ್ಠ ಉಷ್ಣಾಂಶ ಸನಿಹಕ್ಕೆ
ನಗರದಲ್ಲಿ ಕಳೆದ ಕೆಲ ದಿನಗಳಿಂದ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. 27.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 3.1 ಡಿ.ಸೆ. ಕಡಿಮೆ ಇತ್ತಿ. 25.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಉಷ್ಣಾಂಶ ಏರಿಕೆ ಕಂಡಿತ್ತು.
ಉಡುಪಿ: ಹಲವೆಡೆ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ.
ಗುರುವಾರ ತಡರಾತ್ರಿ, ಶುಕ್ರವಾರ ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಬ್ರಹ್ಮಾವರ ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ. ಶುಕ್ರವಾರ ಮೋಡ ಕವಿದ ವಾತಾವರಣ ನಡುವೆ ಮಧ್ಯಾಹ್ನದಿಂದ ರಾತ್ರಿವರೆಗೂ ಕೆಲಕಾಲ ವ್ಯಾಪಕ ಮಳೆಯಾಗಿದೆ. ಕಾರ್ಕಳ ನಿಟ್ಟೆಯಲ್ಲಿ ಗುರುವಾರ ಸುಶೀಲಾ ಆಚಾರ್ತಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಕಾರ್ಕಳ 7.3, ಕುಂದಾಪುರ 32.7, ಉಡುಪಿ 7.81, ಬೈಂದೂರು 36.8, ಬ್ರಹ್ಮಾವರ 10.0, ಕಾಪು 7.2, ಹೆಬ್ರಿ 31.5 ಮಿ. ಮೀ. ಮಳೆಯಾಗಿದ್ದು, ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ ಜಿಲ್ಲೆಯಲ್ಲಿ 21.5 ಮಿ. ಮೀ. ಸರಾಸರಿ ಮಳೆಯಾಗಿದೆ. ಗಾಳಿ-ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬ, ತಂತಿಗಳಿಗೆ ಹಾನಿ ಸಂಭವಿಸಿದೆ. ಶುಕ್ರವಾರ ಉಡುಪಿ, ಮಣಿಪಾಲ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.