ಕೊಪ್ಪಳ: ಭಾನುವಾರ ಮಧ್ಯರಾತ್ರಿಯಿಂದ ಸೋಮವಾರದ ಬೆಳಗಿನ ಜಾವದ ತನಕ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಕುಷ್ಟಗಿ ತಾಲ್ಲೂಕಿನ ಹೆಸರೂರು ಬಳಿಯ ಚೆಕ್ ಡ್ಯಾಮ್ ತುಂಬಿದ್ದು, ಇದೇ ತಾಲ್ಲೂಕಿನ ತಾವರಗೇರಾ ನಂದಾಪೂರ ರಸ್ತೆಯಲ್ಲಿ ಕೆರೆಯ ನೀರು ಹರಿದಿದೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಿಂದ ಕವಲೂರು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿರುವ ಹಿರೇಹಳ್ಳವೂ ತುಂಬಿ ಹರಿದಿದೆ.
ಕಳೆದ ವರ್ಷ ಮಳೆಯ ದರ್ಶನವಿಲ್ಲದೆ ಪರದಾಡಿದ್ದ ಜನರಿಗೆ ಈ ಬಾರಿ ಮೇಲಿಂದ ಮೇಲೆ ಬೀಳುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೂ ಅನುಕೂಲವಾಗಿದ್ದು ರೈತರಲ್ಲಿ ಮೊಗದ ಮೇಲೆ ಮಂದಹಾಸ ಮೂಡಿದೆ.
ಕೊಪ್ಪಳ ನಗರ, ಕುಷ್ಟಗಿ, ತಾವರಗೇರಾ, ಕಾರಟಗಿ, ಕುಕನೂರು ತಾಲ್ಲೂಕುಗಳಲ್ಲಿ ಉತ್ತಮ ಮಳೆ ಬಂದಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ.