ಬೆಳಗಾವಿ : ಹಾಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಚಿಕ್ಕೋಡಿ ಗೆದ್ದು ಇತಿಹಾಸ ನಿರ್ಮಿಸುವರು ಯಾರು ಎಂಬ ಚರ್ಚೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜೋರಾಗಿದೆ.
ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸ, ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಜಾರಕಿಹೊಳಿ ಕುಟುಂಬದ ಮೇಲಿರುವ ಜನರ ಪ್ರೀತಿಯನ್ನು ನಂಬಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪರ ಮತ ಕೇಳಿದ್ದರು.
ಇನ್ನೂ ಮೋದಿ ಮುಖ ನೋಡಿ ನನಗೆ ಮತ ನೀಡಿ ಎಂದು ಹಾಲಿ ಸಂಸದ ಜೊಲ್ಲೆ ಕೇಳಿಕೊಂಡಿದ್ದರು. ಈ ಮಧ್ಯೆ ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಭು ಜನರ ತಲೆಯಲ್ಲಿ ಚಿಂತನೆ ಹರಿಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಚಿಕ್ಕೋಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಕಳೆದ 2019 ರ ಚುನಾವಣೆಗೆ ಹೋಲಿಸಿದರೆ ಪ್ರತಿಶತ ಶೇಕಡಾ 3 ರಷ್ಟು ಮತ ಪ್ರಮಾಣ ಹೆಚ್ಚಳವಾಗಿದ್ದು 78 % ಮತದಾನವಾಗಿದೆ. ಈ ಸಲದ ದಾಖಲೆ ಪ್ರಮಾಣದ ಮತದಾನ ಯಾರಿಗೆ ಲಾಭ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಜನ ಇದ್ದಾರೆ.
ಆದರೆ ಮೇಲ್ನೋಟಕ್ಕೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಲಾಭವಾಗುವ ಲಕ್ಷಣ ಗೋಚರಿಸುತ್ತಿದೆ. ಯಾಕೆಂದರೆ ಮೋದಿ ಅಲೆಯ ನಡುವೆಯೂ ಜಾರಿಹೊಳಿ ಮನೆತನದ ಪ್ರಭಾವ ಮತ್ತು ಹೊಸ ಮುಖದ ಕಡೆ ಜನ ಒಲವು ಹೊಂದಿರುವ ಮಾತು ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತಿವೆ.