ಕಾರವಾರ: ಅತಿಯಾದ ಬಿಸಿಲು, ಹೆಚ್ಚಿದ ಆರ್ದ್ರತೆಯಿಂದ ಕಂಗೆಟ್ಟಿರುವ ಕರಾವಳಿ ಭಾಗದ ಜನತೆಗೆ ತರಕಾರಿ, ಹಣ್ಣಿನ ದರದ ಬಿಸಿಯೂ ತಟ್ಟಿದೆ. ಶತಕದ ಆಸುಪಾಸಿನಲ್ಲಿದ್ದ ಬೀನ್ಸ್ ದರವು ಏಕಾಏಕಿ ದ್ವಿಶತಕ ದಾಟಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.
ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಮಾರುಕಟ್ಟೆಗೆ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ತರಕಾರಿ, ಹಣ್ಣು ಪೂರೈಕೆ ಆಗುತ್ತಿದೆ.
ಬಿಸಿಲ ಝಳ ಹೆಚ್ಚಿದ ಬಳಿಕ ಬೇಡಿಕೆಯಲ್ಲಿರುವ ತರಕಾರಿ, ಹಣ್ಣುಗಳ ದರ ವಿಪರೀತ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ ಈಚೆಗೆ ದರದಲ್ಲಿ ಮತ್ತಷ್ಟು ವ್ಯತ್ಯಾಸ ಕಂಡಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಬೇಸಿಗೆ ಆರಂಭಕ್ಕೂ ಮೊದಲು ಪ್ರತಿ ಕೆ.ಜಿಗೆ ಸರಾಸರಿ ₹80-100 ದರದ ಆಸುಪಾಸಿನಲ್ಲಿ ಮಾರಾಟ ಕಾಣುತ್ತಿದ್ದ ಬೀನ್ಸ್ ಈಗ ಕೆ.ಜಿವೊಂದಕ್ಕೆ ₹200ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಿದ್ದ ಗ್ರಾಹಕರು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುವ ಸ್ಥಿತಿಗೆ ಬಂದಿದೆ.
‘ಬಹುತೇಕ ತರಕಾರಿಗಳು ಬೆಳಗಾವಿ, ದಕ್ಷಿಣ ಮಹಾರಾಷ್ಟ್ರದ ಜಿಲ್ಲೆಗಳಿಂದ ಪೂರೈಕೆ ಆಗುತ್ತವೆ. ಬೀನ್ಸ್ ಸೇರಿದಂತೆ ಬಹುತೇಕ ತರಕಾರಿಗಳನ್ನು ಬೆಳೆಯುವ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಇಳುವರಿಯೂ ಕುಸಿತವಾಗಿದೆ. ಹೀಗಾಗಿ, ಬೇಡಿಕೆಯಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ. ಬೀನ್ಸ್ನಂತಹ ಹೆಚ್ಚು ನೀರು ಬೇಕಿರುವ ತರಕಾರಿಗಳ ಬೆಳೆ ಅರ್ಧಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಇದೇ ದರ ಏರಿಕೆಗೆ ಕಾರಣವಾಗಿರಬಹುದು’ ಎನ್ನುತ್ತಾರೆ ತರಕಾರಿ ವ್ಯಾಪಾರಿ