ಬೆಳಗಾವಿ: ‘ವಿಶೇಷ ಮಕ್ಕಳ ಪೊಲೀಸ್ ಘಟಕದಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಮ್ಮ ಹತ್ತಿರ ಬರುವ ಮಕ್ಕಳ ಸಮಸ್ಯೆ ಸರಿಯಾಗಿ ಆಲಿಸಿ, ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬೇಕು. ಪೊಲೀಸರ ಬಗ್ಗೆ ಮಕ್ಕಳ ಮನದಲ್ಲಿರುವ ಭಯ ಹೋಗಲಾಡಿಸಲು ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ‘ಸಮಾಜ ಅಭಿವೃದ್ಧಿ ಹೊಂದಬೇಕಾದರೆ, ಮಕ್ಕಳು ಹಾಗೂ ಮಹಿಳೆಯರ ರಕ್ಷಣೆ ಅಗತ್ಯ. ಹಾಗಾಗಿ ಅವರ ರಕ್ಷಣೆಗೆ ಸಂಬಂಧಿಸಿ, ಜಾಗ್ರತೆಯಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ‘ಮಕ್ಕಳ ವಿಶೇಷ ಪೊಲೀಸ್ ಘಟಕಗಳಲ್ಲಿ ಯಾವುದೇ ಮಗು ಸಮಸ್ಯೆ ಹೇಳಿಕೊಂಡು ಬಂದಾಗ, ಪ್ರೀತಿಯಿಂದ ಕಂಡು ಆಪ್ತ ಸಮಾಲೋಚನೆ ಮಾಡುತ್ತಿವೆ. ಮಕ್ಕಳ ಸಮಸ್ಯೆ ಗುರುತಿಸಿ, ಅದಕ್ಕೆ ಪರಿಹಾರ ಒದಗಿಸುತ್ತಿವೆ’ ಎಂದರು.
ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಎನ್. ಎಸ್. ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಹರೀಶ ಜೋಗಿ ಅವರು, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯನಿರ್ವಹಣೆ, ಬಾಲನ್ಯಾಯ ಮಂಡಳಿ ಕುರಿತು ಮಾರ್ಗದರ್ಶನ ನೀಡಿದರು.
ನಗರ ಪೊಲೀಸ್ ಉಪ ಆಯುಕ್ತೆ ಪಿ.ವಿ.ಸ್ನೇಹಾ ಸ್ವಾಗತಿಸಿದರು. ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಸದಾಶಿವ ಕಟ್ಟಿಮನಿ ವಂದಿಸಿದರು. ಮಲ್ಲಪ್ಪ ಕುಂದರಗಿ ನಿರೂಪಿಸಿದರು.
Laxmi News 24×7