ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಇಂದು ತಮ್ಮ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.
“ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ.
ರಾಜ್ಯದ ಜನ ನಮಗೆ ಅವಕಾಶ ಕೊಟ್ಟಿದ್ದು ಅವರಿಗೆ ನ್ಯಾಯ ಒದಗಿಸಿ ಋಣ ತೀರಿಸುವುದು ನಮ್ಮ ಕರ್ತವ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೇಂದ್ರ ಸರ್ಕಾರದ ಜತೆ ಸಹಕಾರ, ಸಮನ್ವಯತೆ ಮೂಲಕ ನಡೆದುಕೊಂಡು ಬರುತ್ತಿದ್ದೇವೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ನಿರಂತರವಾಗಿ ಅನ್ಯಾಯ ಮಾಡುತ್ತಿದೆ” ಎಂಬುದು ಕೈ ನಾಯಕರ ಗಂಭೀರ ಆರೋಪವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್ ನಾಯಕರು ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಮ್ಮ ಈ ಪ್ರತಿಭಟನೆ ರಾಜಕೀಯ ಉದ್ದೇಶ ಹೊಂದಿಲ್ಲ. ಬಿಜೆಪಿ ವಿರುದ್ಧವೂ ಅಲ್ಲ, ಬಿಜೆಪಿ ಶಾಸಕರು, ಸಂಸದರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವಂತೆ ಸಿದ್ಧರಾಮಯ್ಯ ಮನವಿ ಮಾಡಿದ್ದು, ಸರ್ವಪಕ್ಷದ ನಾಯಕರು ಭಾಗವಹಿಸುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.
ಬರ ಪರಿಹಾರಕ್ಕೆ ಕೇಂದ್ರ ಬಿಡಿಗಾಸು ಕೊಟ್ಟಿಲ್ಲ. ೧೫ನೇ ಹಣಕಾಸು ಯೋಜನೆಯ ಶಿಫಾರಸ್ಸಿನಂತೆ ೫೪೯೫ ಕೋಟಿ ರೂ. ವಿಶೇಷ ಅನುದಾನ ಬಂದಿಲ್ಲ. ತೆರಿಗೆ ಪಾಲಿನಲ್ಲೂ ತಾರತಮ್ಯವಾಗಿ ೬೨೦೯೮ ಕೋಟಿ ರೂ. ಐದು ವರ್ಷಗಳಲ್ಲಿ ತೆರಿಗೆ ನಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೂ ಹಣ ನೀಡಿಲ್ಲ. ಕೇಂದ್ರ ಸಹಭಾಗಿತ್ವದ ಅನುದಾನ ಕಡಿತವಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕನಸು ಕನಸಾಗಿಯೇ ಉಳಿದಿದೆ.