ಬೆಂಗಳೂರು : ಮಹಿಳೆಯೊಬ್ಬಳು ತಾನು ಕಾಂಗ್ರೆಸ್ (Congress) ಮುಖಂಡೆ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲಕ್ಷಾಂತರ ರೂ. ವಂಚನೆ (Fraud) ನಡೆಸಿರುವ ಪ್ರಕರಣ ಜಯನಗರ ಪೊಲೀಸ್ ಠಾಣಾ (Jayanagar police station) ವ್ಯಾಪ್ತಿಯಲ್ಲಿ ನಡೆದಿದೆ.
ರೂಪ ಮತ್ತಿತರರು ನೀಡಿದ ದೂರಿನ ಮೇರೆಗೆ ಆರೋಪಿ ಸಂದ್ಯಾ ಪವಿತ್ರಾ ನಾಗರಾಜ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಧ್ಯಾ ಪವಿತ್ರಾ ಜನರನ್ನು ಮೋಸಗೊಳಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ರೂಪ ಎಂಬ ಮಹಿಳೆ ತಮ್ಮ ಸೋದರನಿಗೆ ಸರ್ಕಾರಿ ನೌಕರಿ ಕೊಡಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರಿಗೆ ಹರೀಶ್ ಮತ್ತು ಭಾನುಪ್ರಕಾಶ್ ಎಂಬ ವ್ಯಕ್ತಿಗಳ ಮೂಲಕ ಸಂಧ್ಯಾ ಪವಿತ್ರಾ ಪರಿಚಿತಳಾಗಿದ್ದಳು. ಹಂತಹಂತವಾಗಿ ರೂಪ ಅವರಿಂದ 11.20 ಲಕ್ಷ ರೂ. ಹಣ ಪಡೆದಿದ್ದ ಸಂಧ್ಯಾ ತಂಡ, ಬಳಿಕ ತಲೆ ಮರೆಸಿಕೊಂಡಿತ್ತು.
ಈ ಬಗ್ಗೆ ರೂಪ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಠಾಣೆಗೆ ಹಾಜರಾಗಿ ಹಣ ಹಿಂದಿರುಗಿಸುವುದಾಗಿ ಮುಚ್ಚಳಿಕೆ ಮತ್ತು ಚೆಕ್ ಬರೆದುಕೊಟ್ಟಿದ್ದರು. ಆದರೆ ಈಗ ಚೆಕ್ ಬ್ಯಾಂಕ್ ನಿಂದ ತಿರಸ್ಕೃತಗೊಂಡಿದ್ದರೆ, ಸಂಧ್ಯಾ ಕಾನೂನು ಮಖಾಂತರವೇ ಬಗೆಹರಿಸಿಕೊಳ್ಳಿ ಎಂದು ಧಮಕಿ ಹಾಕಿದ್ದಾಳೆ.