ವಿಜಯಪುರ: ಕರ್ನಾಟಕದ ಗಡಿಗೆ ಸಮೀಪವಿರುವ ಗುಡ್ಡಾಪುರದಲ್ಲಿ ಶ್ರೀ ದಾನಮ್ಮದೇವಿಯ ಜಾತ್ರಾ ಮಹೋತ್ಸವದ ಕಳೆಗಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಪಾದಯಾತ್ರೆ ಮೂಲಕ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಬೆಳಗಿನ ಜಾವದಿಂದಲೇ ವಿಜಯಪುರ ನಗರದ ದರ್ಗಾ ಕ್ರಾಸ್ ರಸ್ತೆ ಮೂಲಕ ಮತ್ತು ತಿಕೋಟಾ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಗುಡ್ಡಾಪುರಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ದಾನಮ್ಮ ದೇವಿ ನಾಮಸ್ಮರಣೆ ಮಾಡುತ್ತ ಗುಡ್ಡಾಪುರದತ್ತ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದ ಗಡಿ ಮುಗಿಯುವವರೆಗೂ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.
ಗುಡ್ಡಾಪುರ ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿ ನೆಲೆಸಿರುವ ಶಿವಶರಣೆ ಶ್ರೀ ದಾನಮ್ಮದೇವಿಯ ಶೇಕಡಾ 99% ರಷ್ಟು ಭಕ್ತರು ಕನ್ನಡಿಗರೇ ಆಗಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಶ್ರೀ ದಾನಮ್ಮದೇವಿಯ ದರ್ಶನಕ್ಕೆ ಜಾತ್ರೆಯ ಸಂದರ್ಭದಲ್ಲಿ ಬರುವ ಭಕ್ತರು ಕಾಲ್ನಡಿಗೆಯ ಹರಕೆ ಹೊತ್ತು ಬರುವುದು ವಿಶೇಷ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಶ್ರೀಕ್ಷೇತ್ರ ಗುಡ್ಡಾಪುರದಲ್ಲಿ ದಾನಮ್ಮ ದೇವಿ ಜಾತ್ರಾ ಸಂಭ್ರಮ ಬರದ ನಡುವೆಯೂ ಭಕ್ತಿಯ ಪರಾಕಾಷ್ಠೆಯಿಂದ ಕರ್ನಾಟಕದ ಜನರೇ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸುವ ಜಾತ್ರೆಗೆ ರಾಜ್ಯದ ಜನರು ವಿಜಯಪುರ ಜಿಲ್ಲೆಯ ನಾನಾ ಮಾರ್ಗಗಳಿಂದ ಪಾದಯಾತ್ರೆ ಮೂಲಕ ಹೋಗುತ್ತಿದ್ದಾರೆ. ಸುಕ್ಷೇತ್ರ ಗುಡ್ಡಾಪುರದಲ್ಲಿ ಪ್ರತಿ ವರ್ಷ ಚಟ್ಟಿ ಅಮವಾಸ್ಯೆಯಂದು ದಾನಮ್ಮದೇವಿ ಜಾತ್ರೆ ನಡೆಯುತ್ತದೆ. ವಿಜಯಪುರ, ತಿಕೋಟಾ, ಅಥಣಿ, ತೆಲಸಂಗ ಹೀಗೆ ನಾನಾ ಮಾರ್ಗಗಳ ಮೂಲಕ ಜನ ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ.