ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಾದಿ ಸುಗಮ ಮಾಡಿಕೊಡಲು ಹಾಗೂ ಕೈಗಾರಿಕಾ ಸ್ಥಾಪನೆಗೆ ಎದುರಾಗುವ ತಾಂತ್ರಿಕ, ಕಾನೂನಾತ್ಮಕ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಹೂಡಿಕೆದಾರರ ಪ್ರಾಧಿಕಾರ ರಚಿಸುವ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ-2022ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿತು.
ವಿಧಾನಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಸೂದೆ ಮಂಡಿಸಿ, ರಾಜ್ಯದಲ್ಲಿ ದೊಡ್ಡ-ಅತಿದೊಡ್ಡ ಅಥವಾ ಬೃಹತ್ ಗಾತ್ರದ ಅಂದರೆ 1,250 ಎಕರೆಗೂ ಮೀರಿದ ಹೂಡಿಕೆ ಪ್ರದೇಶ, ಕೈಗಾರಿಕಾ ಪ್ರದೇಶಗಳು ಅಥವಾ ಕ್ಲಸ್ಟರ್ಗಳನ್ನು ಸ್ಥಾಪಿಸಲು, ನಡೆಸಲು, ನಿಯಂತ್ರಿಸಲು ಮತ್ತು ನಿರ್ವಹಿಸಲು ಮುಖ್ಯವಾಗಿ ಜಾಗತಿಕ ಉತ್ಪಾದನ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳಲು, ಈ ಮಸೂದೆವನ್ನು ತರಲಾಗುತ್ತಿದೆ ಎಂದು ವಿವರಣೆ ನೀಡಿದರು.
ವಿಶೇಷ ಹೂಡಿಕೆ ಪ್ರದೇಶ ಪ್ರಾಧಿಕಾರ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಬೆಂಗಳೂರಿಗೆ ಸೀಮಿತವಾಗಿ ಮಾಡಿರುವ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಯಶಸ್ವಿ ಪ್ರಯೋಗವನ್ನು ಆಧರಿಸಿಯೇ ರಾಜ್ಯಕ್ಕೆ ಅನ್ವಯವಾಗುವಂತೆ ವಿಶೇಷ ಹೂಡಿಕೆ ಪ್ರದೇಶ ಪ್ರಾಧಿಕಾರ ತರಲಾಗುತ್ತಿದೆ. ಕೆಎಐಡಿಬಿ ಕೆಲಸ ಈ ಪ್ರಾಧಿಕಾರ ಮಾಡಲಿದೆ. ಹಾಗಂತ, ಕೆಎಐಡಿಬಿ ಅಧಿಕಾರ ಮೊಟಕುಗೊಳ್ಳುವುದಿಲ್ಲ. ಮಸೂದೆಗೆ ಕಾನೂನು ಇಲಾಖೆಯ ಪರಿಶೀಲನೆ ಆಗಿದೆ.
ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಯ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಬೇರೆ-ಬೇರೆ ಕೈಗಾರಿಕಾ ಸಂಘ-ಸಂಸ್ಥೆಗಳ ಬೇಡಿಕೆಯಂತೆ ಈ ಪ್ರಾಧಿಕಾರ ತರಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಉತ್ತರ ಮತ್ತು ದಕ್ಷಿಣದಲ್ಲಿ ಒಂದು ಮಾದರಿಯನ್ನಾಗಿ ಮಾಡಲಾಗುತ್ತಿದೆ ಎಂದರು.