ಗಂಟು ಮೂಟೆ ಕಟ್ಟಿಕೊಂಡು ಕರ್ನಾಟಕ ಸರಕಾರ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಶಿಫ್ಟ್ ಆಗುತ್ತಿದೆ. ಸೋಮವಾರದಿಂದ ಚಳಿಗಾಲದ ಅಧಿವೇಶನ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಬೆಳಗಾವಿ ಮಹಾನಗರದಲ್ಲಿ ಹತ್ತು ದಿನಗಳ ಕಾಲ ಸಚಿವರು, ಅಧಿಕಾರಿಗಳು, ವಿವಿಧ ಪಕ್ಷದ ನಾಯಕರು, ಗಣ್ಯಾತಿ ಗಣ್ಯರು ಓಡಾಡುತ್ತಾರೆ. ಹೀಗಾಗಿ ನಗರದ ರಸ್ತೆಗಳನ್ನು ಸುಧಾರಿಸುವ ಕೆಲಸ ಒಂದು ಕಡೆ ನಡೆದರೆ, ಸುವರ್ಣ ವಿಧಾನಸೌಧಕ್ಕೆ ಹೊಸ ಸ್ವರೂಪ ನೀಡುವ ಕಾರ್ಯವೂ ಭರದಿಂದ ಸಾಗಿದೆ.
ಉತ್ತರ ಕರ್ನಾಟಕದ ಶಕ್ತಿಯ ಕೇಂದ್ರವಾದ ಸುವರ್ಣ ವಿಧಾನಸೌಧವನ್ನು ಶುಚಿಗೊಳಿಸಿ ದೀಪಾಲಂಕಾರ ಮಾಡಿ ಗಣ್ಯರ ವಿವಿಧ ಸವಲತ್ತುಗಳಿಗಾಗಿ ಸೌಧದ ಅಂಗಳದಲ್ಲಿ ಮಂಟಪಗಳನ್ನು ಹಾಕಲಾಗುತ್ತಿದೆ. ಸೌಧದ ಅಂಗಳದಲ್ಲಿರುವ ಕಸವನ್ನು ತೆರವುಗೊಳಿಸಿ ಹಸಿರು ಮಯವನ್ನಾಗಿಸಲು ಅಂಲಕಾರಿಕ ಗಿಡಗಳನ್ನು ಹಚ್ಚುವ ಕಾರ್ಯವೂ ನಡೆದಿದೆ.
ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳಿಗಾಗಿ ಹತ್ತು ದಿನಗಳ ಕಾಲ ಪ್ರತಿಭಟನೆ, ಧರಣಿ ಹಾಗೂ ರ್ಯಾಲಿಗಳನ್ನು ನಡೆಸಲಿದ್ದು, ಅವರಿಗಾಗಿಯೇ ಬಸ್ತವಾಡದ ಬಳಿ ಸ್ಥಳವನ್ನು ನಿಗದಿ ಪಡಿಸಿ ಅಲ್ಲಿ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ವಿಧಾನ ಸೌಧದ ಅಂಗಳ ಪ್ರವೇಶ ಮಾಡದಂತೆ ಪ್ರತಿಭಟನಾಕಾರರನ್ನು ತಡೆಯಲು ವ್ಯವಸ್ಥಿತವಾಗಿ ಬ್ಯಾರಿಕೆಡ್ ಗಳನ್ನು ಹಾಕಿಸಿ ಭದ್ರತೆ ಮಾಡಲಾಗಿದೆ.