Breaking News

ಗುರ್ಲಾಪುರ: ಯೋಧನ ಅಂತ್ಯಕ್ರಿಯೆ

Spread the love

ಮೂಡಲಗಿ: ಬಹು ಅಂಗಾಂಗ ವೈಫಲ್ಯದಿಂದ ದೆಹಲಿಯಲ್ಲಿ ಮಂಗಳವಾರ ನಿಧನರಾದ ಭಾರತೀಯ ಸೇನೆಯ ಹವಾಲ್ದಾರ್ ಪ್ರಕಾಶ ಉದ್ದಪ್ಪ ಇವ್ವಕ್ಕಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

 

ದೆಹಲಿಯಿಂದ ಬೆಳಗಾವಿಯ ವಿಮಾನನಿಲ್ದಾಣಕ್ಕೆ ಬಂದ ಯೋಧನ ಪಾರ್ಥಿವಶರೀರವನ್ನು ಭಾರತೀಯ ಸೇನಾ ವಾಹನದ ಮೂಲಕ ಮಧ್ಯಾಹ್ನ 12ಕ್ಕೆ ಮೂಡಲಗಿಗೆ ತರಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಗುರ್ಲಾಪುರ ಗ್ರಾಮಕ್ಕೆ ತರಲಾಯಿತು. ದಾರಿಯುದ್ದಕ್ಕೂ ‘ಭಾರತ ಮಾತಾಕೀ ಜೈ, ಅಮರ್‌ ರಹೇ ಪ್ರಕಾಶ…’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ಗ್ರಾಮದ ಮಲ್ಲಿಕಾರ್ಜುನ ರಂಗಮಂಟಪದಲ್ಲಿ ಮೃತ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. 61 ಸಿಗ್ನಲ್‌ ಯುನಿಟ್‌, ರಾಜ್ಯ ರೈಫಲ್‌ ಯುನಿಟ್‌ ಮತ್ತು ಮೂಡಲಗಿ ತಾಲ್ಲೂಕು ಆಡಳಿತದಿಂದ ವಿಧಿವತ್ತಾದ ಗೌರವ ಸಲ್ಲಿಸಲಾಯಿತು. ಪತ್ನಿ ಲಕ್ಷ್ಮಿ , ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಕಂಡು ಜನರ ಕಣ್ಣಾಲಿಗಳು ತುಂಬಿದವು.

ಮೂಡಲಗಿ ತಾಲ್ಲೂಕು ಮಾಜಿ ಸೈನಿಕ ಸಂಘದ ಸದಸ್ಯರು, ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್‌ ಡಿ.ಜೆ. ಮಹಾತ, ಬಿಇಒ ಅಜೀತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಾಲ್ಲೂಕು ಪಂಚಾಯ್ತಿ ಇಒ ಚನ್ನಣ್ಣವರ, ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ಪಿಎಸ್‌ಐ ಎಚ್.ವೈ. ಬಾಲದಂಡಿ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಬಿ.ಬಿ. ಹಂದಿಗುಂದ, ಲಕ್ಕಣ್ಣ ಸವಸುದ್ದಿ, ಎನ್.ಟಿ.ಫಿರೋಜಿ, ಈರಯ್ಯಾ ಹಿರೇಮಠ, ಈರಯ್ಯಾ ಜಡಿ ಇದ್ದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ