ಕನ್ನಡ ಹೋರಾಟಗಾರರ ಹೋರಾಟದ ಪರಿಣಾಮ ಬೆಳಗಾವಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇಂದು ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹರಿದ ಬಾವುಟವೇ ಹಾರಾಡುತ್ತಿರೋದು ಸಧ್ಯ ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹರಿದ ಕನ್ನಡ ಬಾವುಟವೇ ಹಾರಾಡುತ್ತಿದೆ. ಮಳೆ, ಗಾಳಿಗೆ ಹರಿದ ಕನ್ನಡ ಬಾವುಟ ಬದಲಾಯಿಸಲು ಪಾಲಿಕೆ ಮುಂದಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವ ಹೊಸ್ತಿಲಿನಲ್ಲಿ ಯಡವಟ್ಟಾಗಿದೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಈ ದಿವ್ಯ ನಿರ್ಲಕ್ಷ್ಯದ ವಿರುದ್ಧ ಕನ್ನಡ ಹೋರಾಟಗಾರರು ಸಿಡಿದೆದ್ದಿದ್ದಾರೆ. ಇಡೀ ರಾಜ್ಯವೇ ಈ ಬಾರಿ ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿದೆ. ಅದರಲ್ಲಿಯೂ ಬೆಳಗಾವಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಲು ಜಿಲ್ಲಾಡಳಿತ ಹಾಗೂ ಕನ್ನಡ ಹೋರಾಟಗಾರರಿಂದ ಭರದ ಸಿದ್ಧತೆ ನಡೆದಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಬಾವುಟಕ್ಕೆ ಅಪಮಾನ ಆಗಿದ್ದು ಕನ್ನಡಿಗರನ್ನು ಕೆರಳಿಸಿದೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಕನ್ನಡ ಬಾವುಟ ನೆಡಲು ಹೋರಾಟ ಮಾಡಬೇಕು. ಬೆಳಗಾವಿ ಮರು ನಾಮಕರಣಕ್ಕೆ ಹೋರಾಟ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರು ಇಡುವಂತೆಯೂ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿಯ ಸುವರ್ಣಸೌಧ, ಪ್ರಾದೇಶಿಕ ಆಯುಕ್ತರ ಕಚೇರಿ, ಕೇಂದ್ರ ಬಸ್ ನಿಲ್ದಾಣ ಮತ್ತು ಈಗ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಬಾವುಟ ಹಾರಾಡುತ್ತಿದೆ.
ಕಳೆದ ಬಾರಿ ಧ್ವಜ ಬದಲಾವಣೆ ಮಾಡಿ ಎಂದು ಹೇಳಲು ಹೋದ್ರೆ ನಮ್ಮ ಮೇಲೆ ಕೇಸ್ ಹಾಕಿದರು. ಕರ್ನಾಟಕ ರಾಜ್ಯೋತ್ಸವಕ್ಕೆ ಇನ್ನು ಕೇವಲ ನಾಲ್ಕು ದಿನ ಅಷ್ಟೇ ಉಳಿದಿದೆ. ಕರ್ನಾಟಕ ಸರ್ಕಾರ ಕನ್ನಡ ಕನ್ನಡ ಎಂದು ಕೇವಲ ಬಾಯಿ ಮಾತಿನಿಂದ ಹೇಳುತ್ತಿದೆ. ಆದರೆ ಬೆಳಗಾವಿಯಲ್ಲಿ ಕನ್ನಡದ ಕಗ್ಗೊಲೆ ಆಗುತ್ತಿದೆ. ಕನ್ನಡ ಬಾವುಟದ ರಕ್ಷಣೆ ಆಗುತ್ತಿಲ್ಲ. ಈಗ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳೇ ಆಗಿದ್ದಾರೆ. ತಕ್ಷಣವೇ ಹೊಸ ಧ್ವಜವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಮುಂದುವರಿದು ಮಾತನಾಡಿದ ಶ್ರೀನಿವಾಸ್ ತಾಳೂಕರ್ ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬದಲಾವಣೆ ಮಾಡಬಾರದು ಎನ್ನುತ್ತಿದ್ದಾರೋ..? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ ನಮಗೆ ಗೊತ್ತಾಗುತ್ತಿಲ್ಲ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕನ್ನಡದ ಅನ್ನ ಊನ್ನುತ್ತಾರೆ ಎಂದರೆ ಸ್ವಲ್ಪವಾದ್ರೂ ಅವರಿಗೆ ಕಳಕಳಿ ಎನ್ನುವುದು ಇರಬೇಕು. ಅಂದಾಗ ಮಾತ್ರ ಪಗಾರ್ ತೆಗೆದುಕೊಳ್ಳುವುದಕ್ಕೆ ಸಾರ್ಥಕವಾಗುತ್ತದೆ ಎಂದು ಎಚ್ಚರಿಸಿದರು.