ಕೊಪ್ಪಳ: ‘ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶಿಗ್ಗಾವಿಯಲ್ಲಿ ತಮ್ಮ ಸ್ವಾರ್ಥ ಸಾಧನೆಗೆ ಹೋರಾಟ ಮಾಡುತ್ತಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ಲಿಂಗಾಯತ ಪಂಚಮಸಾಲಿ (ಪಂಚಸೈನ್ಯ) ಸಮಾಜದ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಬಾದವಾಡಗಿ ‘ಮುಖ್ಯಮಂತ್ರಿ ಮನೆ ಮುಂದೆ ಏಕಾಏಕಿ ಧರಣಿ ಸರಿಯಲ್ಲ. ಇದರಿಂದ ಏನೂ ಪ್ರಯೋಜನವಿಲ್ಲ. ರಾಜಕೀಯ ಉದ್ದೇಶವಿಟ್ಟುಕೊಂಡು ಹೋರಾಟ ಮಾಡುವುದನ್ನು ಸಮಾಜದ ಯಾರೂ ಒಪ್ಪುವುದಿಲ್ಲ. ಸಮಾಜದ ಎಲ್ಲ ಘಟಕಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಬೇಕಾಗಿತ್ತು. ಹೋರಾಟದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ’ ಎಂದರು.
‘ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಜನರಿದ್ದಾರೆ. ಇದರಲ್ಲಿ 60 ಲಕ್ಷಕ್ಕೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ. ಇದರಲ್ಲಿ ಸಾಕಷ್ಟು ಜನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೃತ್ಯುಂಜಯ ಸ್ವಾಮೀಜಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕಂಡುಬರುವ ‘ದೀಕ್ಷಾ ಲಿಂಗಾಯತ’, ಹಾಸನ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಕಂಡು ಬರುವ ‘ಗೌಡ ಲಿಂಗಾಯತ’ ಹಾಗೂ ‘ಮಲೇಗೌಡ’ ಇಂಥ ಜಾತಿಗಳನ್ನು ಪಂಚಮಸಾಲಿ ಪಂಗಡಕ್ಕೆ ಸೇರಿಸಲು ತಾವೊಬ್ಬರೇ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮೀಸಲಾತಿಗಾಗಿ ಕಾನೂನಾತ್ಮಕ ಸಲಹೆಗಳನ್ನು ಪಡೆದುಕೊಳ್ಳಬೇಕು. ರಾಜ್ಯದಾದ್ಯಂತ ಇರುವ ಪದಾಧಿಕಾರಿಗಳ ಘಟಕಗಳನ್ನು ಸಕ್ರಿಯಗೊಳಿಸಿ ಹೋರಾಟ ರೂಪಿಸಬೇಕು. ಸ್ವಯಂಘೋಷಿತ ನಾಯಕರನ್ನು ಸಂಘಟನೆಯಿಂದ ದೂರವಿಟ್ಟು ಹೋರಾಟಕ್ಕೆ ಪ್ರಾಮಾಣಿಕ ಬುನಾದಿ ಹಾಕಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಸ್ವಾಮೀಜಿ ಒಬ್ಬರೇ ಹೋರಾಟ ಮಾಡಿಕೊಳ್ಳಲಿ’ ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭುರಾಜ ಕರ್ಲಿ, ತಾಲ್ಲೂಕು ಘಟಕದ ಅಧ್ಯಕ್ಷ ಜ್ಯೋತಿ ಬಸು, ಜಿಲ್ಲಾ ಯುವ ಮುಖಂಡರಾದ ಪ್ರವೀಣಗೌಡ ತೊಂಡಿಹಾಳ, ವೀರೇಶ ಹಾಲಸಮುದ್ರ ಇದ್ದರು.