ಹೊಸಪೇಟೆ (ವಿಜಯನಗರ): ‘ಸೈನ್ಯ ಸೇರಲು ಬಯಸುವವರು ರೈಲು ಗಾಡಿ, ಬಸ್ ಸುಡುತ್ತಾರೆಯೇ?’ ಹೀಗೆಂದು ಪ್ರಶ್ನಿಸಿದ್ದು ಕೇಂದ್ರ ಗಣಿ ಮತ್ತು ಕಲ್ಲಿದ್ದಲ್ಲು ಖಾತೆ ಸಚಿವ ಪ್ರಹ್ಲಾದ್ ಜೋಶಿ.
ಹಂಪಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಎಲ್ಲದಕ್ಕೂ ವಿರೋಧ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದರಲ್ಲಿ ಕೆಲವು ಸಮಾಜ ವಿದ್ರೋಹಿ ಶಕ್ತಿಗಳು ಕೂಡಿಕೊಂಡಿವೆ. ಟೂಲ್ ಕಿಟ್ ಬಂದಿದ್ದನ್ನು ಗಮನಿಸಿರಬಹುದು. ಬಿಹಾರದಲ್ಲಿ ಮೊದಲು ಗಲಭೆ ಆರಂಭಗೊಂಡಿತ್ತು. ಅನಂತರ ಉತ್ತರ ಪ್ರದೇಶಕ್ಕೆ ವ್ಯಾಪಿಸಿತು. ಈ ಗಲಭೆ ಮಾಡಿದವರು ಶೇ 95ರಷ್ಟು ಜನರು ಯಾರು ಸೈನಿಕರಾಗಲು ಅರ್ಜಿ ಸಲ್ಲಿಸಿಲ್ಲ. ಅಂತಹವರರಿಗೆ ಸೈನ್ಯ ಸೇರುವ ಆಸಕ್ತಿಯೂ ಇಲ್ಲ. ಅಂತಹವರು ಬಂದು ರೈಲು ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸೈನ್ಯ ಸೇರಬಯಸುವವರು ರೈಲು, ಬಸ್ ಸುಡುತ್ತಾರೆಯೇ? ನಮ್ಮ ಮಕ್ಕಳು ಹೋಗುವಂತಹ ಶಾಲಾ ಮಕ್ಕಳ ಬಸ್ಸಿಗೆ ಕಲ್ಲು ಹೊಡೆಯುತ್ತಾರೆಯೇ? ಇದನ್ನು ಕೆಲವರು ಪ್ರಾಯೋಜಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಅಗ್ನಿಪಥದಂತಹ ಯೋಜನೆ ಜಗತ್ತಿನ ಅನೇಕ ದೇಶಗಳಲ್ಲಿ ಜಾರಿಯಲ್ಲಿವೆ. ನಮ್ಮ ದೇಶದಲ್ಲಿ ಈಗ ಸೈನ್ಯದ ಸರಾಸರಿ ವಯಸ್ಸು 32 ವರ್ಷ ಇದೆ. ನಮ್ಮ ಸೈನ್ಯ ಇನ್ನೂ ಹೆಚ್ಚು ‘ಯಂಗ್’ ಆಗಿರಬೇಕೆಂಬ ಕಾರಣಕ್ಕೆ ಯೋಜನೆ ಜಾರಿಗೆ ತರಲಾಗುತ್ತಿದೆ. ಅಗ್ನಿಪಥದಲ್ಲಿ ಸೇರಿದವರಿಗೆ ಒಳ್ಳೆಯ ಪ್ಯಾಕೇಜ್ ಇದೆ. 12ನೇ ತರಗತಿ ಪ್ರಮಾಣ ಪತ್ರ ಕೊಡುವ ವ್ಯವಸ್ಥೆ ಕೂಡ ಆಗುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಅನೇಕ ಹೊಸ ಅವಕಾಶಗಳಿವೆ. ಶಿಕ್ಷಣ ಮುಂದುವರೆಸಲು ಅವಕಾಶ ಇದೆ. ಪೊಲೀಸ್ ಇಲಾಖೆ, ಸರ್ಕಾರಿ ಆಡಳಿತ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಬಹುದು. ಮೀಸಲಾತಿ ಕೂಡ ಘೋಷಿಸಿದ್ದಾರೆ. ಅಗ್ನಿಪಥ ಯೋಜನೆಯನ್ನು ಶೇ 95ರಷ್ಟು ನಿವೃತ್ತ ಹಾಗೂ ಹಾಲಿ ಮಿಲಿಟರಿ ಅಧಿಕಾರಿಗಳನ್ನು ಬೆಂಬಲಿಸಿದ್ದಾರೆ’ ಎಂದು ಹೇಳಿದರು ಎಂದರು.