ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಪಂಡಿತರ ಹತ್ಯೆಗಳು ವ್ಯಾಪಕವಾಗಿ ವರದಿಯಾಗ್ತಿದ್ದಂತೆ ಬೀದಿಗಿಳಿದಿರುವ ಪಂಡಿತ ಸಮುದಾಯ ವಲಸೆ ಹೋಗೋದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 24 ಗಂಟೆಯ ಒಳಗೆ ಸುರಕ್ಷಿತ ಸ್ಥಳವನ್ನ ಗೊತ್ತುಪಡಿಸಿ ಸೂಕ್ತ ಭದ್ರತೆ ನೀಡದಿದ್ದಲ್ಲಿ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಹೇಳಿದೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿರೋ ಕೇಂದ್ರ ಸರ್ಕಾರ ಹಿಂದೂ ಉದ್ಯೋಗಿಗಳನ್ನ ಕಾಶ್ಮೀರದ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆ ಮಾಡಿದೆ. ಇನ್ನು ನಿನ್ನೆಯೂ ಸಹ ಜಮ್ಮು ಮೂಲದ ರಜನಿ ಬಾಲಾ ಎಂಬ ಹಿಂದೂ ಶಿಕ್ಷಕಿಯನ್ನ ಕುಲ್ಗಾಮ್ ಬಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಇದನ್ನ ವಿರೋಧಿಸಿ ಅಲ್ಲಿನ ಜನ ನಿನ್ನೆಯಿಂದಲೇ ಬೀದಿಗಳಿದಿದ್ದು ಸರ್ಕಾರಕ್ಕೆ ಒತ್ತಾಯ ಮಾಡ್ತಿದ್ರು. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ ಕಾಶ್ಮೀರದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಆದ್ರೆ ಬಿಜೆಪಿ ಎಂಟನೇ ವರ್ಷದ ಸಂಭ್ರಮದಲ್ಲಿ ತೇಲಾಡ್ತಿದೆ. ಇದು ಸಿನಿಮಾ ಅಲ್ಲ ಅಂತ ಕೇಂದ್ರದ ವಿರುದ್ದ ಕೆಂಡಕಾರಿದ್ದಾರೆ. ಅಂದ್ಹಾಗೆ ಪ್ರಧಾನ ಮಂತ್ರಿ ವಿಶೇಷ ಯೋಜನೆಯಲ್ಲಿ ಸುಮಾರು 4,000 ಉದ್ಯೋಗಿಗಳನ್ನ ಕಾಶ್ಮೀರದಲ್ಲಿ ನೇಮಕ ಮಾಡಲಾಗಿದೆ.