ಬೆಂಗಳೂರು, ಮಾ.5: 2022-23ನೆ ಸಾಲಿನ ಆಯವಯ್ಯದಲ್ಲಿ ರಾಜ್ಯದ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಬೇಡಿಕೆಗಳನ್ನು ಹಾಗೂ ನಿರುದ್ಯೋಗಿ ಯುವಕರ ಧ್ವನಿಯನ್ನು ಪರಿಗಣಸದೆ ಇರುವುದು ವಿಷಾದಕರ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ರಮೇಶ್ ಬಾಬು ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಸುಮಾರು ಐದೂವರೆ ಲಕ್ಷ ಸರಕಾರಿ ಮತ್ತು ಅರೆ ಸರಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಅವರು ಪಡೆಯುತ್ತಿರುವ ವೇತನಗಳು ಜುಲೈ 2022ರ ವರೆಗೆ ಅನ್ವಯಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ನಂತರ ಪರಿಷ್ಕೃತ ವೇತನವನ್ನು ಸರಕಾರಿ ಮತ್ತು ಅರೆ ಸರಕಾರಿ ನೌಕರರಿಗೆ ನೀಡಬೇಕಾಗಿರುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಏಳನೇ ವೇತನ ಆಯೋಗ ರಚನೆ ಮಾಡಬೇಕಾಗಿತ್ತು. ಆದರೆ, ಬಜೆಟ್ನಲ್ಲಿ ಈ ಯಾವುದೆ ಪ್ರಸ್ತಾಪ ಮಾಡದೆ ಇರುವುದು ದುರದೃಷ್ಟಕರ ಎಂದು ರಮೇಶ್ ಬಾಬು ತಿಳಿಸಿದ್ದಾರೆ.