ಪಾಂಡವಪುರ: ಕೆಆರ್ಎಸ್ ಪಕ್ಷದ ಕಾರ್ಯಕರ್ತರ ಬಂಧನ ವಿರೋಧಿಸಿ ಕಾನೂನು ಭಂಗ ಚಳವಳಿ ನಡೆಸಲು ಗುರುವಾರ ಪಟ್ಟಣಕ್ಕೆ ಬಂದಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹಾಗೂ 54 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ತಾಲ್ಲೂಕು ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಕೆಆರ್ಎಸ್ ಪಕ್ಷದ 9 ಮಂದಿ ಕಾರ್ಯಕರ್ತರ ಬಂಧನ ವಿರೋಧಿಸಿ ಪಾಂಡವಪುರ ಚಲೋ ರೂಪಿಸಲಾಗಿತ್ತು. ಪಟ್ಟಣದ ಐದು ದೀಪ ವೃತ್ತಕ್ಕೆ ಬರುತ್ತಿದ್ದಂತೆ ರವಿಕೃಷ್ಣಾ ರೆಡ್ಡಿ ಅವರನ್ನು ಸಬ್ ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸರು ತಡೆದರು.
ಜಿಲ್ಲೆಯಾದ್ಯಂತ ಕೋವಿಡ್ ಕಾರಣದಿಂದ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಪ್ರತಿಭಟನೆಗಳಿಗೆ ಅವಕಾಶವಿಲ್ಲ. ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ರವಿಕೃಷ್ಣಾ ರೆಡ್ಡಿ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಒಪ್ಪದ ರವಿಕೃಷ್ಣಾ ರೆಡ್ಡಿ ಹಾಗೂ 54 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಕೆಆರ್ಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.