ಮುಂಬೈ: ನಿವೃತ್ತಿ ಘೋಷಣೆ ಮಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂಬ ಮಾತು ಎಲ್ಲೆಡೆ ಕೇಳಿಬರುತ್ತದೆ.ಅಗಸ್ಟ್ 15ರಂದು ಸಂಜೆ ಎಂಎಸ್ ಧೋನಿಯವರು ಕೇವಲ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿದ್ದರು. ಈ ಮೂಲಕ ಮತ್ತೆ ಧೋನಿಯವರನ್ನು ನೀಲಿ ಜೆರ್ಸಿಯಲ್ಲಿ ನೋಡಾ ಬಯಸಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಜೊತೆಗೆ ವಿದಾಯ ಪಂದ್ಯವಾಡದೇ ಧೋನಿ ನಿವೃತ್ತಿ ಹೊಂದಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.
ಇದರ ಜೊತೆಗೆ ಧೋನಿಯವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂಬ ಒತ್ತಾಯಗಳು ಕೂಡ ಕೇಳಿ ಬಂದಿದ್ದವು. ಇತ್ತೀಚೆಗೆ ಈ ವಿಚಾರವಾಗಿ ಮಾತನಾಡಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೂರೆನ್, ಧೋನಿ ನಮ್ಮ ದೇಶದ ಮತ್ತು ರಾಜ್ಯದ ಹೆಮ್ಮೆ. ಆತನನ್ನು ಮತ್ತೆ ನೀಲಿ ಬಣ್ಣದ ಜೆರ್ಸಿಯಲ್ಲಿ ನೋಡಲು ಆಗಲ್ಲ ಎಂಬುದು ನೋವಾಗಿದೆ. ಹೀಗಾಗಿ ಅವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದರು.ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಇದೀಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಬಹುಶಃ ಐಪಿಎಲ್ ನಂತರ ನಾವು ಏನು ಮಾಡಬಹುದೆಂದು ನೋಡುತ್ತೇವೆ. ಏಕೆಂದರೆ ಧೋನಿ ರಾಷ್ಟ್ರಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಮತ್ತು ಅವರು ಎಲ್ಲ ಗೌರವಗಳಿಗೆ ಅರ್ಹರು. ನಾವು ಅವರಿಗೆ ಬೀಳ್ಕೊಡುಗೆ ಪಂದ್ಯವನ್ನು ನಡೆಸಲು ಬಯಸಿದ್ದೆವು. ಆದರೆ ಧೋನಿ ವಿಭಿನ್ನ ಆಟಗಾರ. ಯಾರೂ ಯೋಚಿಸದಿದ್ದಾಗ ಅವರು ನಿವೃತ್ತಿಯನ್ನು ಘೋಷಿಸಿದರು ಎಂದು ಹೇಳಿದ್ದಾರೆ.
Laxmi News 24×7