Breaking News

ಯುಕೆ-27 ಹೋಟೆಲ್‌ನಲ್ಲಿ ಮುರುಗೇಶ ನಿರಾಣಿ- ಸತೀಶ ಜಾರಕಿಹೊಳಿ ರಹಸ್ಯ ಮಾತುಕತೆ

Spread the love

ಬೆಳಗಾವಿ: ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಲ್ಲಿನ ಯುಕೆ-27 ಹೋಟೆಲ್‌ನಲ್ಲಿ ರಹಸ್ಯವಾಗಿ ಬುಧವಾರ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಅವರು ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಪ್ರಯಾಣಿಸಿ ಮತ್ತೊಂದು ಹೋಟೆಲ್‌ನಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯಲ್ಲಿ ಭಾಗಿಯಾದರು.

ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮತ್ತು ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಬುಧವಾರ ಇಲ್ಲಿಯೇ ಸಭೆ ನಡೆಸಿದ್ದರು. ಕಾರ್ಮಿಕರ ವೇತನ ಪರಿಷ್ಕರಣೆಗೆ ತಿಂಗಳಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು. ಮರು ದಿನವೇ ಇಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಭೆ ನಡೆಸಿ, ತಮ್ಮ ನಡೆಯ ಬಗ್ಗೆ ಚರ್ಚಿಸಿರುವುದು ಮಹತ್ವ ಪಡೆದುಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುರುಗೇಶ ನಿರಾಣಿ, ‘ನಾನು ಹಾಗೂ ಸತೀಶ ಜಾರಕಿಹೊಳಿ ಒಟ್ಟಿಗೇ ಬೆಂಗಳೂರಿನಿಂದ ವಿಮಾನದಲ್ಲಿ ಬಂದೆವು. ಇಬ್ಬರೂ ಹೋಟೆಲ್‌ನಲ್ಲಿ ಊಟ ಮಾಡಿದೆವು. ಈ ಭಾಗದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿದ್ದೆವು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ;ರಾಜಕೀಯದ ಬಗ್ಗೆ ಚರ್ಚಿಸಿಲ್ಲ’ ಎಂದರು.

‘ಎಲ್ಲ ಸಕ್ಕರೆ ಕಾರ್ಖಾನೆಗಳವರೂ ನ.1ರ ನಂತರ ಕಬ್ಬು ಅರೆಯುವ ಹಂಗಾಮನ್ನು ಏಕಕಾಲಕ್ಕೆ ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗಿದೆ. ಆದರೆ, ದರದ ಬಗ್ಗೆ ತೀರ್ಮಾನವಾಗಿಲ್ಲ’ ಎಂದು ತಿಳಿಸಿದರು.

‘ನನ್ನ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ₹ 5 ಕೋಟಿ ಕಬ್ಬಿನ ಬಿಲ್ ಬಾಕಿ ಇದ್ದದ್ದು ನಿಜ. ಅದನ್ನು ಪಾವತಿಸಲಾಗಿದೆ. ಈಗ ಯಾವುದೇ ಬಾಕಿ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಸಕ್ಕರೆಯನ್ನು ಗೋದಾಮಿನಲ್ಲಿ ಇಟ್ಟಾಗ ನಮಗೆ ಲಾಭ ಬರುವುದಿಲ್ಲ. ಕಷ್ಟದಲ್ಲಿರುವ ರೈತರಿಗೆ ಹಣ ಕೊಡಲೇಬೇಕು ನಿಜ. ಎಷ್ಟು ಸಾಧ್ಯವೋ ಅಷ್ಟು ಬೇಗ ಕೊಡುವುದಕ್ಕೆ ಕ್ರಮ ವಹಿಸಲಾಗುತ್ತಿದೆ. ವೇತನ ಪರಿಷ್ಕರಣೆ ಮಾಡದ ಕಾರ್ಖಾನೆಗಳ ಕಾರ್ಮಿಕರು ಮನವಿ ಸಲ್ಲಿಸಿದರೆ ಪರಿಶೀಲಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು


Spread the love

About Laxminews 24x7

Check Also

ಬಾಗಲಕೋಟೆ: ಹಳ್ಳಕ್ಕೆ ಬಿದ್ದ ಬಾಲಕ, ಕಾಪಾಡಲು ಹೋದ ಯುವಕ ನೀರುಪಾಲು

Spread the loveಬಾಗಲಕೋಟೆ: ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್​ ತಾಲೂಕಿನ ಚಿಕನಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ