ಇನ್ನು ಅದೆಷ್ಟು ಸಂಕಟ ನೀಡುತ್ತೋ ಈ ವೈರಸ್ ಗೊತ್ತಿಲ್ಲ. ಇದೆ ವರ್ಷ 2 ತಿಂಗಳ ಹಿಂದೆ, ದೇಶ ತಲ್ಲಣಿಸಿ ಹೋಗಿತ್ತು. ಕಾರಣ 2ನೇ ಅಲೆ. ಅದು ಮೊದಲ ಅಲೆ ರೀತಿ ಹೀಗೆ ಬಂದು ಹಾಗೆ ಹೋಗ್ಲೆ ಇಲ್ಲ. ಬಂದು ತನ್ನ ಬತ್ತಳಿಕೆಗೆ ಅದೆಷ್ಟೋ ಜನರನ್ನು ತನ್ನ ಜೊತೆ ಕರೆದೊಯ್ತು. ಈಗ ಮತ್ತೆ ಇದೆ ವೈರಸ್ ಹೊಸ ಸದ್ದು ಮಾಡ್ತಾ ಇದೆ. ಒಬ್ಬನಿಂದ ಎಷ್ಟು ಜನರಿಗೆ ಈ ವೈರಸ್ ಹರಡುತ್ತೆ ಅನ್ನೋ ಲೆಕ್ಕಾಚಾರ, ಆರ್- ನಾಟ್ ವ್ಯಾಲ್ಯೂ ಭಾರತದಲ್ಲಿ ಮತ್ತೆ ಭೀತಿ ಹುಟ್ಟಿಸ್ತಾ ಇದೆ. ಈ ಆರ್- ನಾಟ್ ವ್ಯಾಲ್ಯೂ ಎಷ್ಟಿದೆ ಗೊತ್ತಾ ? ಈ ಸ್ಟೋರಿ ನೋಡಿ.
ಈ ರೀತಿ ದಿನಗಳು ಬರುತ್ತೆ, ನಮ್ಮನ್ನು ಕಾಡಿ ಬಿಡುತ್ತೆ ಅನ್ನೋದು ಯಾರು ಊಹಿಸಿರಲಿಲ್ಲ. ಆ ಕರಾಳ ದಿನಗಳನ್ನು ಇಡೀ ವಿಶ್ವ ಅನುಭವಿಸಿದ್ದಾಗಿದೆ. ಒಂದು ಮುಗಿದ ನಂತರ ಚೇತರಿಸಿಕೊಳ್ಳವು ಹೊತ್ತಿಗಾಗಲೇ, ಇನ್ನೋಂದು ರೂಪ ಹೊತ್ತು ಮತ್ತೆ ಮತ್ತೆ ನಮ್ಮನ್ನು ಕಾಡ್ತಾ ಇದೆ ಈ ಕೊರೊನಾ ವೈರಸ್

ಯಾವಾಗಲು ಬ್ಯೂಸಿ ಲೈಫ್ ನಲ್ಲಿ ತಮ್ಮನ್ನು ಸಹ ಮರೆತು ಬದುಕಿದ್ದ ಕಾಲಕ್ಕೆ, ಕೊಡಲಿ ಪೆಟ್ಟು ಬೀಳುವ ಹಾಗೆ ಕೊರೊನಾ ವಿಶ್ವಕ್ಕೆ ಅಪ್ಪಳಿಸಿ ಎಲ್ಲವನ್ನು ತಲೆಕೆಳಗೆ ಮಾಡಿಬಿಟ್ಟಿತ್ತು. ಅದರಲ್ಲೂ ಎರಡನೇ ಅಲೆಯಲ್ಲಿ ನಾವು ನೋಡಿದ ಹಾಗೆ ಇಲ್ಲಿ ಉಳಿಗಾಲವೇ ಇಲ್ಲ ಅನ್ನೋ ಭೀತಿ ಹುಟ್ಟಿಸಿಬಿಟ್ಟಿತ್ತು. ದೇಶ ಅನುಭವಿಸಿದ ಕೊರೊನಾ ಎರಡನೇ ಅಲೆ ಮತ್ತೊಮ್ಮ ಬರುವ ಸಾಧ್ಯತೆ ಇದೆ ಅಂದ್ರೆ ? ಹೇಗಾಗಬೇಡ ಹೇಳಿ !
ಕೊರೊನಾ ಮೊದಲು ವಿಶ್ವಕ್ಕೆ ಕಂಡಾಗ, ದೇಶ ಕೂಡಲೇ ಎಚ್ಚೆತ್ತುಕೊಂಡು ಲಾಕ್ ಡೌನ್ ನಿಯಮವನ್ನು ಜಾರಿ ಮಾಡಿತ್ತು. ಮೊದಲ ಅಲೆ ನಮಗೆ ಅಷ್ಟೇನು ಕಾಣಿಸಲಿಲ್ಲ. ಆದರೆ ಎರಡನೇ ಅಲೆ ಭಾರತಕ್ಕೆ ಹೆಚ್ಚು ಅಪಾಯಕಾರಿ ಆಗಲಿದೆ ಎಂದು ತಜ್ಙರು ಊಹಿಸಿದ್ದರು. ಅವರ ಊಹೆಗೆ ಪುಷ್ಟಿ ನೀಡಿದ್ದೆ ಆರ್- ನಾಟ್ ವ್ಯಾಲ್ಯೂ. ಈ ಒಂದು ಮ್ಯಾಥಮೆಟಿಕಲ್ ಲೆಕ್ಕಾಚಾರದಿಂದ ದೇಶದಲ್ಲಿ ಕೊರೊನಾ ಸಾಂಕ್ರಮಿಕದ ಭೀಕರತೆ ಎಷ್ಟಿದೆ ಎಂದು ತಜ್ಙರು ಸಲೀಸಾಗಿ ಹೇಳಬಹುದು. ಇದೆ ವ್ಯಾಲ್ಯೂ ಈ ಹಿಂದೆ ಎಚ್ಚರಿಕೆಯ ಗಂಟೆಯಾಗಿತ್ತು. ಇದನ್ನು ಗಣನೆಗೆ ತೆಗೆದುಕೊಳ್ಳದ್ದಿದ್ದರೆ ಯಾವ ಪರಿಸ್ಥಿತಿ ಎದುರಾಗುತ್ತದೆ ಅನ್ನೋದು ನಮಗೆಲ್ಲ ಅರಿವಿರ ಬೇಕು.
ಆರ್-ನಾಟ್ (R-0) ವ್ಯಾಲ್ಯೂ ಅಂದ್ರೆ ಏನು ?
ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳಬೇಕೆಂದ್ರೆ ಆರ್- ನಾಟ್ ವ್ಯಾಲ್ಯೂ ಅನ್ನೊದು ಒಂದು ಮ್ಯಾಥಮೆಟಿಕಲ್ ಲೆಕ್ಕಾಚಾರ. ಇದು ಒಬ್ಬ ಸೋಂಕಿತ ಎಷ್ಟು ಜನಕ್ಕೆ ಸೋಂಕನ್ನು ಹರಡಿಸಬಹುದು ಎನ್ನುವ ಊಹೆ. ಇದನ್ನು ಸೋಂಕಿನ ತೀವ್ರತೆ, ದೇಶದ ಜನರ ಚಲನವಲನ ಹಾಗೂ ಜನರಲ್ಲಿರುವ ರೋಗ ನಿರೋಧಕ ಶಕ್ತಿ, ಹೀಗೆ ಹಲವು ವಿಷಯಗಳನ್ನು ಪರಿಗಣಿಸಿ ಲೆಕ್ಕಾಚಾರ ಹಾಕಲಾಗುತ್ತೆ.
ಈ ವ್ಯಾಲ್ಯೂ ಜೀರೋ ಇಂದ 10 ರ ತನಕ ವ್ಯತ್ಯಾಸ ಕಾಣಿಸಬಹುದು. ವ್ಯಾಲ್ಯೂ ಹೆಚ್ಚಿದ್ದರೆ ಆತಂಕವೂ ಹೆಚ್ಚು. ಕಳೆದ ಭಾರಿ ವೈರಸ್ ಉಲ್ಬಣವಾದಾಗ ಆರ್- ನಾಟ್ ವ್ಯಾಲ್ಯೂ 3 ರ ತನಕ ತಲುಪಿತ್ತು, ಅಂದ್ರೆ ಒಬ್ಬ ಸೋಂಕಿತ 3ಕ್ಕಿಂತ ಹೆಚ್ಚು ಜನರಿಗೆ ಸೋಂಕನ್ನು ಹರಡಬಲ್ಲನ್ನು ಎನ್ನುವುದು. ಅಂದರೇ ಸೋಂಕು ಹರಡುವ ವೇಗ ಹೆಚ್ಚಾಗಿರುತ್ತದೆ. ಇದರಿಂದ ಕೊರೊನಾ ಎರಡನೇ ಅಲೆ ಅದೆಷ್ಟು ಭೀಕರವಾಗತ್ತು ನೀವೆ ಯೋಚಿಸಿ.
ಭಾರತದ ಆರ್-ನಾಟ್ ವ್ಯಾಲ್ಯೂನಲ್ಲಿ ಮತ್ತೆ ಏರಿಕೆ
ಮೂರನೇ ಅಲೆ ಸೂಚಿಸುವ ಆರ್-ನಾಟ್ ವ್ಯಾಲ್ಯೂ ವರದಿ
ಮೊದಲ ಅಲೆ ಭಾರತಕ್ಕೆ ಅಪ್ಪಳಿಸಿದಾಗ, ಒಬ್ಬ ಸೋಂಕಿತ ತನ್ನ ಸುತ್ತ 8 ಜನಕ್ಕೆ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿತ್ತು. ಎರಡನೇ ಅಲೆ ಹೊತ್ತಿಗೆ ಭಾರತೀಯ ವಿಜ್ಞಾನಿಗಳು ಆರ್ -ನಾಟ್ ಎನ್ನುವ ಅಂಕಿ-ಅಂಶವನ್ನು ಸಿದ್ದಪಡಿಸಿಕೊಂಡರು.
ಈ ವರದಿಯ ಅನುಸಾರ ದೇಶದಲ್ಲಿ ಮಾರ್ಚ 2021ರ ಹೊತ್ತಿಗೆ ದೇಶದ ಒಟ್ಟು ಆರ್ ವ್ಯಾಲ್ಯೂ 1.37 ಎಂದು ಅಂದಾಜಿಸಲಾಗಿತ್ತು. ಅಲ್ಲದೆ ಜೂನ್ ತಿಂಗಳ ಹೊತ್ತಿಗೆ ಇದೆ ವ್ಯಾಲ್ಯೂ 1.17 ಕ್ಕೆ ಇಳಿಕೆ ತೋರಿಸಿ ಅಲ್ಲಿಂದ ನಿಧಾನವಾಗಿ ಸಂಪೂರ್ಣ ಇಳಿಕೆ ಸಾಧಿಸಿತ್ತು. ಆದರೆ ಇದೀಗ ಇಂಡಿಯಾದಲ್ಲಿ ಮತ್ತೆ ಆರ್ ವ್ಯಾಲ್ಯೂ ಏರಿಕೆ ಕಂಡಿದೆ. ಇದು ದೇಶದಲ್ಲಿ ಮತ್ತೆ ಸೋಂಕಿನ ತೀವ್ರತೆ ಹೆಚ್ಚುವ ಸಂಭವ ವೃದ್ಧಿಸಿದೆ.

ದೇಶದ ಆರ್ ವ್ಯಾಲ್ಯೂ ಮತ್ತೆ 1 ಕ್ಕೆ ಏರಿಕೆ!
ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರುವ ಸಾಧ್ಯತೆ.
ಕಳೆದ ಶುಕ್ರವಾದ ದೇಶದ ಹೊಸ ಸೋಂಕಿನ ಪ್ರಕರಣದಲ್ಲಿ ದಿಢೀರ್ ಏರಿಕೆ ಕಂಡಿತ್ತು. ಅದು ಒಂದೇ ದಿನ ಬರೋಬರಿ 44 ಸಾವಿರ ಪ್ರಕರಣಗಳು ಕಾಣಿಸಿಕೊಳ್ತು. ಸೋಂಕಿನ ಸಂಖ್ಯೆಯಲ್ಲಿ ಏರಿಕೆ ಕಂಡ ಬಳಿಕ ಎಚ್ಚೆತ್ತ ತಜ್ಞರು, ಲೆಕ್ಕ ಹಾಕಿದ ಆರ್ ವ್ಯಾಲ್ಯೂವಿನಲ್ಲಿ ಆತಂಕದ ವರದಿ ಸಿಕ್ಕಿದೆ. ಹೌದು ದೇಶದ ಒಟ್ಟು ಅಂದಾಜು ಆರ್ ವ್ಯಾಲ್ಯೂ 1 ಕ್ಕೆ ಏರಿದೆ. ಇದರಿಂದ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುವ ಸಂಭವವೂ ಹೆಚ್ಚಿದೆ.
ಕೇರಳ ಕರ್ನಾಟಕದಲ್ಲೂ 1 ರ ಸಮೀಪ ತಲುಪಿರುವ ಆರ್-ನಾಟ್ ವ್ಯಾಲ್ಯೂ
ಮಹಾರಾಷ್ಟ್ರ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಆತಂಕ ಶುರು
ಒಂದೇ ದಿನ ದೇಶದಲ್ಲಿ 44 ಸಾವಿರ ಹೊಸ ಕೇಸ್ ಗಳಿಂದ ಭಾರತದ ಒಟ್ಟು ಸೋಂಕಿತರ ಸಂಖ್ಯೆ 31 ಲಕ್ಷಕ್ಕೆ ಮುಟ್ಟಿದೆ. ಅದರಲ್ಲಿ ಉತ್ತರದ ಮಹಾರಾಷ್ಟ್ರ ಹಾಗೂ ದಕ್ಷಿಣದ ಕೇರಳ, ಕರ್ನಾಟಕ ಮೊದಲ ಮೂರು ಸ್ಥಾನವನ್ನು ಅಲಂಕರಿಸಿದೆ.
ಅಲ್ಲದೆ ಈಗ ಕೇರಳದಲ್ಲಿ ಮತ್ತೆ ಹೊಸ ರೂಪಾಂತರಿ ಡೆಲ್ಟಾ ತಳಿಯ ಹರಡುವಿಕೆ ಕಾಣಿಸುವುದರ ಜೊತೆಗೆ ಮಹಾರಾಷ್ಟ್ರದಲ್ಲೂ ಸಹ ದೈನಂದಿನ ಪ್ರಕರಣಗಳು ಏರಿಕೆ ಕಾಣಿಸಿದೆ. ಜೊತೆಗೆ ಕರ್ನಾಟಕ ಶೀಘ್ರದಲ್ಲೆ ಮತ್ತೊಂದು ಹೊಡೆತಕ್ಕೆ ಸಜ್ಜಾಗಬೇಕು ಎನ್ನುತ್ತಿದ್ದಾರೆ ತಜ್ಞರು. ಕಾರಣ ಕೇರಳದಲ್ಲಿ ಆರ್ ವ್ಯಾಲ್ಯೂ 1.2 ರ ಲೆಕ್ಕ ಹೇಳುತ್ತಿದ್ದರೆ, ಕರ್ನಾಟಕ 0.9 ಅಂದ್ರೆ 1ರ ಸಮೀಪದಲ್ಲೆ ಇರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಬಹುದು.
ದೆಹಲಿ, ಹಿಮಾಚಲ ಪ್ರದೇಶ, ಉತ್ತರ್ಖಂಡ್ನಲ್ಲಿ ಸೋಂಕು ಏರಿಕೆ
ಉತ್ತರದ ಗುಡ್ಡ ಪ್ರದೇಶಗಳಲ್ಲೂ ಸೋಂಕು ಹೆಚ್ಚಾಗೊ ಸಾಧ್ಯತೆ
ಇದು ದಕ್ಷಣ ಭಾರತದಲ್ಲಿ ಅಷ್ಟೆ ಅಲ್ಲ. ರಾಜಧಾನಿ ದೆಹಲಿಯಲ್ಲೂ ಕೊರೊನಾ ಸಾಂಕ್ರಮಿಕದ ಹೊಸ ಅಲೆ ಪ್ರಾರಂಭವಾಗಿದೆ. ದೆಹಲಿ, ಹಿಮಾಚಲ ಪ್ರದೇಶ, ಉತ್ತರ್ಖಂಡ್ನಲ್ಲಿ ಕೂಡ ಆರ್ ನಾಟ್ ವ್ಯಾಲ್ಯೂ 1ರ ಲೆಕ್ಕವನ್ನು ತೋರಿದ್ದು ಕೂಡಲೇ ಆ ರಾಜ್ಯಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಇಷ್ಟೆ ಅಲ್ಲ ದೇಶದ ವಿವಿದ ರಾಜ್ಯಗಳು ಆರ್ ನಾಟ್ ವ್ಯಾಲ್ಯೂವಿನಲ್ಲಿ ಏರಿಕೆ ಕಂಡಿದೆ. 8 ಕ್ಕಿಂತ ಹೆಚ್ಚು ರಾಜ್ಯಗಳು 1 ರ ಸಮೀಪ ತಲುಪಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ
ರಾಜ್ಯಗಳ ಆರ್-ನಾಟ್ ವ್ಯಾಲ್ಯೂ
ಉತ್ತರ್ ಖಂಡ್ ನಲ್ಲಿ ಆರ್-ವ್ಯಾಲ್ಯೂ 1.17, ಹಿಮಾಚಲದಲ್ಲಿ 1.13, ದೆಹಲಿಯಲ್ಲಿ 1.01 ಮಿಜೋರಾಂನಲ್ಲಿ 1.56, ಮೇಘಾಲಯದಲ್ಲಿ 1.27, ಸಿಕ್ಕಿಂನಲ್ಲಿ 1.26, ಮಣಿಪುರದಲ್ಲಿ 1.08 ಹಾಗೂ ಕೇರಳದಲ್ಲಿ 1.2 ಆರ್-ನಾಟ್ ವ್ಯಾಲ್ಯೂಗಳು ಕಾಣಿಸಿದೆ.
ಈ ಎಂಟು ರಾಜ್ಯಗಳಲ್ಲಿ 1 ರ ಸಮೀಪ ತಲುಪಿದರೆ, ಮಹಾರಾಷ್ಟ್ರ, ಕರ್ನಾಟಕ, ಆಂದ್ರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳಲ್ಲಿ 0.96 ಅಂದ್ರೆ 1 ರ ಸಮೀಪದಲ್ಲೆ ಇದೆ. ಈ ಲೆಕ್ಕಾಚಾರವನ್ನು ಪರಿಗಣಿಸದೆ ಮುಂದಾದರೆ ಇದು ಇನ್ನೊಂದು ಅಲೆಗೆ ಸ್ವಾಗತ ನೀಡಿದಂತೆ ಅನ್ನುತ್ತಾರೆ ತಜ್ಞರು.

ಆರ್-ನಾಟ್ ವ್ಯಾಲ್ಯೂ 1 ಕ್ಕಿಂತ ಹೆಚ್ಚಿದ್ದರೆ ಏನಾಗಬಹುದು ?
ಆರ್- ನಾಟ್ ವ್ಯಾಲ್ಯೂ 1 ಕ್ಕಿಂತ ಹೆಚ್ಚಿದ್ದರೆ, ಒಬ್ಬ ಸೋಂಕಿತ ಒಬ್ಬರಿಗಿಂತ ಹೆಚ್ಚು ಜನಕ್ಕೆ ಸೋಂಕನ್ನು ಹರಡುತ್ತಿದ್ದಾನೆ ಎಂದರ್ಥ. ಇದರಿಂದ ಸಾಂಕ್ರಾಮಿಕದ ತೀವ್ರತೆ ಹೆಚ್ಚೆಚ್ಚು ವೃದ್ಧಿಸುತ್ತದೆ. ಈ ಸಂಖ್ಯೆ ಏರುತ್ತಿದ್ದಂತೆ ಕೊರೊನಾ ವೈರಸ್ ಎಲ್ಲೆಲ್ಲೋ ಉಲ್ಭಣವಾಗುತ್ತಿದೆ ಅನ್ನೋದು ಇದು ವರೆಗೂ ಕೊರೊನಾ ವೈರಸ್ ನ ಇತಿಹಾಸ. ಎರಡನೇ ಅಲೆ ಕಡಿಮೆ ಆಗುತ್ತಿದ್ದ ಬೆನ್ನಲ್ಲೆ ಇದೀಗ ಆರ್- ನಾಟ್ ವ್ಯಾಲ್ಯೂವಿನಲ್ಲಿ ಏರಿಕೆ ಕಾಣಿಸಿರೋದು ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಮುನ್ಸೂಚನೆ ಆಗಿರೋದು ಕನ್ಫರ್ಮ್.
ಕೊರೊನಾ ಸೋಂಕಿತರ ಏರಿಕೆ ಹಾಗೂ ಇಳಿಕೆಯ ಲೆಕ್ಕವನ್ನು ಇದುವರೆಗೂ ಆರ್- ನಾಟ್ ನಿಖರವಾಗೆ ಹೇಳಿದೆ. ಆದರೆ ಕೆಲವು ತಜ್ಞರು, ಕೇವಲ ಆರ್- ನಾಟ್ ವ್ಯಾಲ್ಯೂವಿನಿಂದ ನಿರ್ಭಂದ ಹೇರುವುದು ತಪ್ಪು, ಇದರ ಬದಲು, ಸೋಂಕಿನ ತೀವ್ರತೆ ಹೇಗಿದೆ, ಎಷ್ಟು ಜನರಿಗೆ ಹರಡುತ್ತಿದೆ ಎನ್ನುವ ಅಧ್ಯಯನದ ಮೇಲೆ ಸರ್ಕಾರ ಪ್ಲಾನ್ ಮಾಡಬೇಕು ಎನ್ನುವ ಸೂಚನೆಗಳನ್ನು ನೀಡುತ್ತಿದ್ದಾರೆ.
ಆದರೆ ಈಗ ಕೇರಳ, ಮಹಾರಾಷ್ಟ್ರ ಹಾಗೂ ಬೇರೆ ಬೇರೆ ರಾಜ್ಯದಲ್ಲಿ ಏರುತ್ತಿರುವ ಸಂಖ್ಯೆಯನ್ನು ಗಮನಿಸಿದರೆ, ಆರ್-ನಾಟ್ ವ್ಯಾಲ್ಯೂ ಮತ್ತೊಮ್ಮೆ ತನ್ನ ನಿಖರತೆಯನ್ನು ಪ್ರೂವ್ ಮಾಡಿದೆ. ಎಷ್ಟೆ ಆದರೂ ಸರ್ಕಾರ ಹಾಗೂ ಜನತೆ ಮೂರನೆ ಅಲೆಗೆ ಸಿದ್ಧತೆ ಮಾಡಿಕೊಳ್ಳೋದೆ ಒಳಿತು.
ದೇಶದಲ್ಲಿ ಮತ್ತೆ ಸೋಂಕು ಉಲ್ಭಣವಾಗ್ತಾ ಇದೆ, ಇದರ ಜೊತೆಗೆ ತಜ್ಞರ ವರದಿ ಕೂಡ ಅಪಾಯದ ಮುನ್ಸೂಚನೆ ನೀಡ್ತಾ ಇದೆ. ಎಲ್ಲವನ್ನು ತಾಳೆ ಹಾಕಿ ನೋಡಿದರೆ, ಯಾವದಕ್ಕೂ ನಮ್ಮ ಎಚ್ಚರದಲ್ಲಿ ನಾವು ಇರೋದು ಒಳಿತು. ಸೇಫ್ ಆಗಿರಿ.., ಮನೆಯಲ್ಲೆ ಇರಿ.. ಎಚ್ಚರದಿಂದಿರಿ.