ಹ್ಯಾಮಿಲ್ಟನ್, ಜ.28- ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿರುವ ಕೊಹ್ಲಿ ಹುಡುಗರು ಇಂದು ಇಲ್ಲಿ ನಡೆಯಲಿರುವ 3ನೆ ಟ್ವೆಂಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ಗೆ ಸರಣಿ ಸೋಲನ್ನು ನೀಡಲು ಸಜ್ಜಾಗಿ ನಿಂತಿದೆ. 2020ರ ವರ್ಷದ ಆರಂಭದಿಂದಲೂ ಗೆಲುವಿನ ಸಿಂಚನವನ್ನೇ ಕಂಡಿರುವ ಭಾರತ ತಂಡದ ನಾಯಕ ವೆಸ್ಟ್ಇಂಡೀಸ್, ಆಸ್ಟ್ರೇಲಿಯಾ ವಿರುದ್ಧ ಗೆದ್ದ ನಂತರ ಈಗ ಸ್ವದೇಶದಲ್ಲೇ ನ್ಯೂಜಿಲೆಂಡ್ಗೆ ಸೋಲಿನ ಕಹಿ ಉಣಿಸಲು ಸಜ್ಜಾಗಿದೆ.
ಅಕ್ಲೆಂಡ್ನಲ್ಲಿ ನಡೆದ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿರುವ ಭಾರತ ಯುವ ಪಡೆಯು ಹ್ಯಾಮಿಲ್ಟನ್ನಲ್ಲೂ ತಮ್ಮ ಪ್ರಬುದ್ಧ ಪ್ರದರ್ಶನ ತೋರಿಸಲು ನೆನ್ನೆ ಮೈದಾನದಲ್ಲಿ ಪ್ರಾಕ್ಟೀಸ್ನಲ್ಲಿ ತೊಡಗಿದ್ದರು. ಟೀಂ ಇಂಡಿಯಾದ ತರಬೇತುದಾರ ರವಿಶಾಸ್ತ್ರಿ 3ನೆ ಪಂದ್ಯವನ್ನು ಗೆಲ್ಲಲು ಕೆಲವು ಸಲಹೆಗಳನ್ನು ನೀಡಿದರು. ನ್ಯೂಜಿಲೆಂಡ್ ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಕಂಡಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಗಳಿಸುವತ್ತ ಗಮನ ಹರಿಸಿದ್ದಾರೆ.
ಪಂದ್ಯದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ತಂಡದ ನಾಯಕ ನೆಟ್ಸ್ನಲ್ಲಿ ಅಲ್ಲದೆ ಜಿಮ್ ಅನ್ನು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಭಾರತ ತಂಡವು ಬಲಿಷ್ಠವಾಗಿದ್ದರೂ ಕೂಡ ಇಂದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ನವದೀನ್ಸೈನಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೂಡ ಕೊಹ್ಲಿ ಚಿಂತಿಸಿದ್ದಾರೆ.
ಎರಡು ಪಂದ್ಯಗಳನ್ನು ಸೋತು ಸರಣಿ ಸೋಲುವ ಭೀತಿಯಲ್ಲಿರುವ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್ ಇಂದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ತಂಡದಲ್ಲಿ ಹಲವು ಬದಲಾವಣೆಯನ್ನು ಮಾಡಿಕೊಳ್ಳಲಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ಈವರೆಗೆ ಒಟ್ಟು 14 ಟಿ-20 ಪಂದ್ಯಗಳನ್ನಾಡಿದೆ. ಇದರಲ್ಲಿ ಕಿವೀಸ್ 8 ಪಂದ್ಯ ಗೆದ್ದರೆ, ಭಾರತ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.