ಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 79ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು 4,700 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳು 1,200 ಕೋಟಿ ರೂ. ಬಿಲ್ ಬಾಕಿ ಉಳಿದಿದೆ. ಕಬ್ಬು ಕಳುಹಿಸಿದ 14 ದಿನಗಳ ಒಳಗಾಗಿ ಕಬ್ಬಿ ಬಿಲ್ ನೀಡಬೇಕು ಎಂಬುದು ನಿಯಮವಿದೆ. ಆದರೆ, ಡಿಸೆಂಬರ್ನಲ್ಲಿ ಕಾರ್ಖಾನೆಗೆ ಕಬ್ಬು ಕಳುಹಿಸಿದ ಬೆಳೆಗಾರರು ಕಬ್ಬಿ ಬಿಲ್ಗಾಗಿ ಕಾರ್ಖಾನೆಗೆ ಅಲೆದಾಡುತ್ತಿದ್ದಾರೆ. ಮೂರು ತಿಂಗಳಿನಿಂದ ಕೆಲ ಕಾರ್ಖಾನೆ ಬಿಲ್ ನೀಡುತ್ತಿಲ್ಲ.
ಈಗಾಗಲೇ ರಾಜ್ಯ ಸರ್ಕಾರವು ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ಪ್ರತಿ ಟನ್ಗೆ 50 ರೂ. ಆರ್ಥಿಕ ನೆರವು (ಸಬ್ಸಿಡಿ) 300 ಕೋಟಿ ರೂ. ರೈತರಿಗೆ ಬಿಡುಗಡೆ ಮಾಡಿದೆ.ಆದರೆ, ಸಕ್ಕರೆ ಕಾರ್ಖಾನೆ ಪ್ರತಿ ಟನ್ಗೆ 50 ರೂ. ರಂತೆ ಬಿಡುಗಡೆ ಮಾಡಿಲ್ಲ. ಕಾರ್ಖಾನೆಯ ಮಾಲೀಕರು ಉದ್ದೇಶ ಪೂರಕವಾಗಿಯೇ ಬಿಲ್ ನೀಡದೆ ಬೆಳೆಗಾರರನ್ನು ಅಲೆದಾಡಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಕಾರ್ಖಾನೆಗಳಿಗೆ ಬೀಗ ಹಾಕಿ ಕಬ್ಬಿನ ಬಾಕಿ ವಸೂಲಿ ಮಾಡಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ದೂರಿದರು.
2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರಿಗೆ ನಿಗದಿತ ಸಮಯದಲ್ಲಿಯೇ ಬಿಲ್ ನೀಡಲಾಗುವುದು ಎಂದು ಮಾತು ಕೊಟ್ಟಿದ್ದರೆ. ಆದರೆ, ಇದೀಗ ಬಿಲ್ಗಾಗಿ ರೈತರನ್ನು ಅಲೆದಾಡಿಸುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ,ಸಕ್ಕರೆ ಆಯುಕ್ತ, ಸಕ್ಕರೆ ಸಚಿವರು ಕೂಡಲೇ ಕಾರ್ಖಾನೆಗಳಿಗೆ ನೋಟೀಸ್ ನೀಡಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಮಹೇಶ ಸುಬೇದಾರ, ಸೋಮು ಬಿರಾದಾರ, ಪ್ರೇಮ ಚೌಗಲಾ, ಸಿದ್ದಲಿಂಗ ಪೂಜೇರಿ, ಈರಣ್ಣಾ ಸಸಲಾಟ್ಟಿ, ಸಂಜು ಆವಣ್ಣವರ, ಜಗದೀಶ ದೇವರಡ್ಡಿ, ಸತ್ಯಪ್ಪ ಮಲ್ಲಾಪುರ ಇತರರಿದ್ದರು.
Laxmi News 24×7