ಬೆಂಗಳೂರು : ಆಗಸ್ಟ್ ತಿಂಗಳು ಆರಂಭಗೊಂಡಿದೆ. ಕಳೆದ ವರ್ಷ ಈ ಹೊತ್ತಿಗೆ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ , ಈ ಬಾರಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಏಳುವುದು ಗ್ಯಾರಂಟಿ . ಏಕೆಂದರೆ ಈಗ ಅಂದುಕೊಂಡ ಮಟ್ಟಕ್ಕೆ ಜಲಾಶಯಗಳು ತುಂಬುತ್ತಿಲ್ಲ.
ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ. ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ.
