ಬೆಂಗಳೂರು(ಏ. 27): ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಪಾದರಾಯನಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಕೊನೆಗೂ ಖಾಕಿ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾಡುಗೊಂಡನ ಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಇರ್ಫಾನ್ನನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಮತ್ತು ಜೆಜೆ ನಗರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇರ್ಫಾನ್ನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮತ್ತು ಗಲಾಟೆ ನಡೆಸಲು ಜನರನ್ನು ಪ್ರಚೋದಿಸಿದ ಆರೋಪ ಇರ್ಫಾನ್ ಮೇಲಿದೆ. ಆ ಪ್ರಕರಣದಲ್ಲಿ ಪೊಲೀಸರು ಮಾರನೆಯ ದಿನ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರಾದರೂ ಪ್ರಮುಖ ಆರೋಪಿ ಇರ್ಫಾನ್ ಸೇರಿದಂತೆ ಕೆಲ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇರ್ಫಾನ್ ಬೇರೆ ರಾಜ್ಯಕ್ಕೆ ಹೋಗಿಬಿಟ್ಟಿರುವ ಸುದ್ದಿಯೂ ಇತ್ತು. ಆದರೆ, ಇರ್ಫಾನ್ನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ಆತನ ಸುಳಿವು ಸಿಕ್ಕಿತ್ತು. ಇರ್ಫಾನ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೆಜಿ ಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿರುವ ವಿಷಯ ಪೊಲೀಸರಿಗೆ ತಿಳಿಯಿತು. ಕೂಡಲೇ ಸಿಸಿಬಿ ಪೊಲೀಸರು ಮತ್ತು ಜೆಜೆ ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಇರ್ಫಾನ್ ಇದ್ದ ಮನೆಯನ್ನು ಇವತ್ತು ಮಧ್ಯಾಹ್ನ ಸುತ್ತುವರಿದರು. ಬಳಿಕ ಇರ್ಫಾನ್ನನ್ನು ಬಂಧಿಸಿದ್ದಾರೆ. ಇರ್ಫಾನ್ಗೆ ಆಶ್ರಯ ಕೊಟ್ಟಿದ್ದ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಗಲಾಟೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಇನ್ನೂ 20 ಮಂದಿಯ ಶೋಧ ನಡೆಯುತ್ತಿದೆ. ಆ ಆರೋಪಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.
ಪಾದರಾಯನಪುರ ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ಹಾಟ್ ಸ್ಪಾಟ್ ಆಗಿದೆ. ಗಲಾಟೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆಲವರಲ್ಲೂ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ರಾಮನಗರ ಜೈಲಿಗೆ ಹಾಕಲಾಗಿದ್ದ ಇವರನ್ನು ಈಗ ವಾಪಸ್ ಬೆಂಗಳೂರಿಗೆ ಕರೆತಂದು ಹಜ್ ಭವನದಲ್ಲಿಡಲಾಗಿದೆ.
Laxmi News 24×7
