ಸಂಕೇಶ್ವರ: ಪಟ್ಟಣದಲ್ಲಿ ಫೆ.19ರಂದು ಅನಾವರಣಗೊಳ್ಳಲಿರುವ ಅಶ್ವಾರೂಢ ಶಿವಾಜಿ ಮಹಾರಾಜರ ಪ್ರತಿಮೆಯ ಬೃಹತ್ ಮೆರವಣಿಗೆ ಹಾಗೂ ಶೋಭಾ ಯಾತ್ರೆಯು ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಡ ಪ್ರತಿಮೆಗೆ ಪಟ್ಟಣದ ಶಂಕರಾಚಾರ್ಯರ ಸಂಸ್ಥಾನ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿಯ ಸ್ವಾಮೀಜಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ಜಾಂಜ ಪದಕ, ಡೋಲ್ ತಾಶ ಸೇರಿದಂತೆ ಅನೇಕ ಪಾರಂಪರಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಮಧ್ಯೆ ಶಿವಾಜಿ ಮಹಾರಾಜರ ಪ್ರತಿಮೆ ಹೊತ್ತ ವಾಹನ ಸಾಗಿದ್ದು ವಿಶೇಷವಾಗಿತ್ತು.
ಛತ್ರಪತಿ ಶಿವಾಜಿ ಮಹಾರಾಜ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ ಹತನೂರೆ, ಉಪಾಧ್ಯಕ್ಷ ಅಮರ ನಲವಡೆ, ಹಿರಾ ಶುಗರ್ ಕಾರ್ಖಾನೆಯ ಅಧ್ಯಕ್ಷ ನೀಖಲ್ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ,ಅಪ್ಪಾಸಾಹೇಬ ಶಿರಕೋಳಿ, ವಿನಯ್ ಪಾಟೀಲ, ಶಿವಾನಂದ ಮುಡಶಿ, ಸುನೀಲ ಪರ್ವತರಾವ್, ಪ್ರಮೋದ ಹೊಸಮನಿ ಭಾಗವಹಿಸಿದ್ದರು. ಸಂಕೇಶ್ವರ ಪೊಲೀಸ್ ಠಾಣೆಯ ಸಿಪಿಐ ಪ್ರಹ್ಲಾದ ಚನ್ನಗಿರಿ ಬಂದೋಬಸ್ತ್ ಒದಗಿಸಿದ್ದರು.