ರಾಯಚೂರು, ಜೂ. 18: ಶುಕ್ರವಾರ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ನಸುಕಿನ ಜಾವದವರೆಗೆ ಗುಡುಗು-ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸಂಭವಿಸಿದೆ.
ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಕಾಡ್ಲೂರು, ಜೇಗರಕಲ್, ದೇವಸೂಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.
ರಾಯಚೂರಿನ ಮಸ್ಕಿಯಲ್ಲಿ ಮಳೆ, ಬಿರುಗಾಳಿ ರೌದ್ರಾವತಾರ; ನೆಲಕ್ಕುರುಳಿದ ಮರ, ಕಂಬ, ಮನೆಗಳು
ತುಂಬಿ ಹರಿಯುತ್ತಿರುವ ಕಾಡ್ಲೂರು ಕಿರು ಸೇತುವೆ: ರಸ್ತೆ ಸಂಚಾರ ಸ್ಥಗಿತ
ಕಾಡ್ಲೂರು ಕಿರು ಸೇತುವೆಯ ಕೆಳಗೆ ತುಂಬಿ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸಂಪೂರ್ಣವಾಗಿ ರಸ್ತೆ ಸ್ಥಗಿತಗೊಂಡಿದೆ. ಅದೇ ಮಾರ್ಗದಿಂದ ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಕಂಪನಿಗಳಿಗೆ ತೆರಳುವ ಕಾರ್ಮಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ವಾಪಸ್ ತೆರಳಿದರು. ಇದೇ ಮಾರ್ಗದಿಂದ ಜೇಗರಕಲ್, ಅರಷಿಣಿಗಿ, ಗುರ್ಜಾಪುರ, ಕರೇಕಲ್, ರಂಗಾಪುರ, ಬೇವಿನಬೆಂಚಿ ಸೇರಿದಂತೆ ಸುತ್ತಲಿನ 20ಕ್ಕೂ ಅಧಿಕ ಹಳ್ಳಿಗಳ ಜನರು ತೊಂದರೆ ಅನುಭವಿಸಿದರು.ಕಾಡ್ಲೂರು ಕಿರು ಸೇತುವೆಯ ದುರಸ್ತಿಗೆ ಹಲವು ಬಾರಿಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜವಾಬ್ದಾರಿತನ ವಹಿಸುತ್ತಿದ್ದಾರೆ. ಮಳೆ ಬಂದಾಗ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.