ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ನಿವಾಸಿಗಳು ಕಳೆದ ನಾಲ್ಕು ತಿಂಗಳಿಂದ ಕಲುಷಿತ ನೀರನ್ನ ಕುಡಿದು ಆಸ್ಪತ್ರೆ ಪಾಲಾಗುತ್ತಿದ್ದಾರಂತೆ. ಇಲ್ಲಿನ ನೀರು ಹೇಗಿದೆ ಅಂದ್ರೆ ನೀರು ಬಗೆ ಬಗೆ ಬಣ್ಣಕ್ಕೆ ತಿರುಗಿದೆ. ಕುಡಿಯುವ ಜಲವೂ ವಾಸನೆ ಬರುತ್ತಿದೆ. ದಾಹ ತಣಿಸುವ ಹನಿಯೆಲ್ಲವೂ, ಒಗರೊಗರು ರುಚಿ ಬರುತ್ತಿದೆ. ಶುದ್ಧ ನೀರಿನಲ್ಲಿ ಯಾವೆಲ್ಲ ಗುಣಗಳು ಇರಬಾರದೋ ಅದೆಲ್ಲವೂ ಈ ನೀರಿನಲ್ಲಿದೆ.
ಅಷ್ಟಕ್ಕೂ ಇದಕ್ಕೆಲ್ಲ ಕಾರಣ, ಮಾಜಿ ಶಾಸಕ ಅಶೋಕ ಪಟ್ಟಣ, ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅಂತೆ. ಯಾಕಂದ್ರೆ.. ಅಶೋಕ ಪಟ್ಟಣ ಶಾಸಕರಾಗಿದ್ದ, 68ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ರು. ಮೂರು ವರ್ಷದಿಂದ ಶುದ್ಧ ನೀರು ಕೂಡ ಬರ್ತಿತ್ತು. ಆದ್ರೆ, ಘಟಕವನ್ನ ಕಾಂಗ್ರೆಸ್ ಕಾರ್ಯಕರ್ತ ನಿರ್ವಹಣೆ ಮಾಡ್ತಿದ್ನಂತೆ. ಈ ವಿಷ್ಯ ತಿಳಿದ ಹಾಲಿ ಶಾಸಕ ಮಹಾದೇವಪ್ಪ, ನಾಲ್ಕು ತಿಂಗಳ ಹಿಂದೆ ಟೆಂಡರ್ ಕ್ಯಾನ್ಸಲ್ ಮಾಡಿಸಿದ್ದಾರಂತೆ. ಹೀಗಾಗಿ, ಅಂದಿನಿಂದ ಶುದ್ಧೀಕರಣ ಘಟಕ ನಿರ್ವಹಣೆ ಆಗದೆ, ಜನರಿಗೆ ಕಲುಷಿತ ನೀರು ಬರ್ತಿದೆ.
ಬೋರವೆಲ್ ಕೂಡ ಪಟ್ಟಣದಲ್ಲಿ ಬಂದ್ ಆಗಿದ್ದು ಜನರು ಅನಿವಾರ್ಯವಾಗಿ ಕಲುಷಿತ ನೀರಿನ್ನ ಕುದಿಸಿ ಆರಿಸಿ ಕುಡಿಯುತ್ತಿದ್ದಾರೆ. ಇಷ್ಟಾದರೂ ಮಕ್ಕಳು, ಮಹಿಳೆಯರು, ವಯಸ್ಸಾದವರು ಜ್ವರ, ನೆಗಡಿ, ಕೆಮ್ಮಿನಿಂದ ಬಳಲುವಂತಾಗಿದೆ. ಇನ್ನು, ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ಕಿಡಿಕಾರಿದ್ದು, ಟೆಂಡರ್ ಯಾರಿಗಾದ್ರೂ ನೀಡಿ ಶುದ್ಧೀಕರಣ ಘಟಕ ನಿರ್ವಹಿಸಿ ಅಂದಿದ್ದಾರೆ.
ಗ್ರಾಮದ ಮನೆ ಮನೆಗೂ ಕಲುಷಿತ ನೀರು ಪೂರೈಕೆ ಆಗ್ತಿದೆ. ಊರಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ನೀರಿನ ಗುಣಮಟ್ಟ ಪರೀಕ್ಷೆಗೆ ಟಿಎಚ್ಒ ಸೂಚನೆ ನೀಡಿದ್ದಾರೆ.
ಒಟ್ನಲ್ಲಿ, ಮಾಜಿ-ಹಾಲಿ ಶಾಸಕರ ನಡುವಿನ ಜಟಾಪಟಿಯಿಂದ ಜನರೆಲ್ಲ, ಕಲುಷಿತ ನೀರು ಕುಡಿಯುವಂತಾಗಿದೆ. ಜನರು ರೊಚ್ಚಿಗೆದ್ದು ಬೀದಿಗೆ ಇಳಿಯುವಷ್ಟ್ರಲ್ಲಿ, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ರೆ, ಜನರೇ ಪಾಠ ಕಲಿಸೋದು ಗ್ಯಾರೆಂಟಿ.
Laxmi News 24×7